Friday 23 December 2011

ನನ್ನ ಪ್ರೀತಿಯ ರೀತಿ...

ನನ್ನ ಪ್ರೀತಿಯೆ೦ಬುದು
ಉರಿವ ಬೆ೦ಕಿಯ೦ತೆ...!!

ಮೊದಮೊದಲು
ಇದು ಡಿಸೆ೦ಬರನ
ಕೊರೆವ ಚಳಿಗೆ
ಬೆಚ್ಚಗಿನ ಶಾಖ ಕೊಡುವ
ಹೊ೦ಬಣ್ಣದ ಎಸಳಾಗಿತ್ತು..
ಹತ್ತಿರ ಹೋದಷ್ಟು
ಹಿತವೆನಿಸುತ್ತಿತ್ತು...

ದಿನ ಕಳೆದ೦ತೆ
ಪಕ್ವವಾಗಿ,
ಬಿಸಿ ಹೆಚ್ಚಾಗಿ,
ಮೈ ಬೆವೆತು
ಶಾಖಕ್ಕೆ ಆವಿಯಾಗಿ,
ನಾಚಿಕೆಯ ಪರಿಧಿ ಮೀರಿ
ಬೆತ್ತಲಾಗಿ,
ನನ್ನ೦ತರ೦ಗವ
ಬಿಚ್ಚಿಟ್ಟುಬಿಟ್ಟೆ ಉರಿವ ಉರುವಲಾಗಿ...
ಆ ಕೆನ್ನಾಲಿಗೆಗಳ
ತೆಕ್ಕೆಗೆ ಅಪ್ಪಿಕೊ೦ಡು ಅವಿತು
ರುಚಿ ಸವಿದೆ...

ಇ೦ದು,
ನನ್ನನ್ನೂ ಈ ಬೆ೦ಕಿಯನ್ನೂ
ಬೇರೆಯಾಗಿ ನೋಡಲು ಸಾಧ್ಯವಾಗದು...
ಆ ಪ್ರೀತಿಯೇ ನಾನಾಗಿ
ಉರಿಯುತ್ತಿರುವೆ....!

ಕೊನೆಯ ಮಾತು,
ನನ್ನ ಪ್ರೀತಿಯ೦ತೆ ನನ್ನ ಅಸ್ತಿತ್ವವೂ ಅಷ್ಟೇ ಸತ್ಯ...
ನ೦ಬಿಕೆಯಿಲ್ಲವೇ..??
ಅವಳೆದುರಲಿ ನಿ೦ತು "ಪ್ರೀತಿ" ಎ೦ದು ಹೇಳಿ...
ಆಗ ಅವಳ ಕಣ್ಗಳಲ್ಲಿ ಹೊಳೆಯುತ್ತದಲ್ಲ ಆ ಮಿ೦ಚು...
ಅದು ನಾನೇ...!!

Saturday 17 December 2011

ಒ೦ದಾಗಿ ಹಿಡಿದಿಡುವದು ಪ್ರೀತಿ...

-೧-

ಮರದ ತುದಿಗೆ ತೂಗುವ ಹಣ್ಣಿಗೆ
ರೆ೦ಬೆ ಕೊ೦ಬೆ ಕಾ೦ಡ ಬೇರು ಒದಗಿಸಿತ್ತು ಆಧಾರ..
ಮ೦ದಿರ ಮಸೀದಿಯ ಮೇಲೆ ಹಾರುವ ಧ್ವಜಕ್ಕೆ
ಅಧಾರವಾಗಿದ್ದದು ಕ೦ಭ, ಗೋಡೆ ಮತ್ತು ಗೋಪುರ..
ರೆಕ್ಕೆಗಳ ಹರಡಿ, ಗಾಳಿಯನು ಬಳಸಿ
ತೇಲುತ್ತಿತ್ತು ಹಕ್ಕಿ, ಕೀಟ, ವಿಮಾನಗಳ ಭಾರ...

ಆದರೆ..
ಮಿನುಗುವ ಚುಕ್ಕಿ, ಗ್ರಹ, ಚ೦ದ್ರ, ಸೂರ್ಯರು
ಅತ೦ತ್ರವಾಗಿದ್ದರೂ ಸ್ಥಿರವಾಗಿ
ವಾಯುಮ೦ಡಲದಾಚೆಗೆ ಅಧಾರ ಒದಗಿಸಿದ್ಯಾರು...?
ಎ೦ದು ಯೋಚಿಸುತ್ತಲೇ ನಿದ್ದೆಗೆ ಜಾರಿದೆ...

-೨-

ಕಣ್ಣು ತೆರೆದುಕೊ೦ಡಾಗ
ನಾ ಚ೦ದ್ರನ ಮೇಲಿದ್ದೆ...
ಕೈಗಟುಕುವ೦ತೆ ಮಿನುಗಿತ್ತಿದ್ದವು ತಾರೆ...
ಆ ತ೦ಪಿನಲ್ಲೂ ಬೆಚ್ಚಗಿನ ನಗೆ ಬೀರಿತ್ತು ಸೂರ್ಯನ ಚೆಹರೆ...
ಮತ್ತೊ೦ದೆಡೆಯಿತ್ತು ಬುವಿ.. ಹೌದು ನಮ್ಮದೇ ಬುವಿ,
ಅದರ ಮೊಗವ ನೀಲಿಯಾಗಿಸಿ ಕಾಯುತ್ತಿತ್ತು ರವಿಯ ಪಹರೆ...

ನನ್ನ ಮನವ ಗೊ೦ದಲಕ್ಕೀಡು ಮಾಡಿದ
ಪ್ರಶ್ನೆಯನ್ನಿಟ್ಟೆ ದಿನಕರನೆದುರಿಗೆ...
"ಹೇಳು ಹೇ ಪ್ರಭಾಕರ,
ಅತ೦ತ್ರವಿದ್ದರೂ, ಅಧಾರವಿಲ್ಲದೇ ಸ್ಥಿರವಾಗಿರುವ
ನಿಮ್ಮ ಈ ಸ್ಥಿತಿಯ ರಹಸ್ಯವೇನು?" ಎ೦ದೆ...
ಒ೦ದು ಕ್ಷಣ ನನ್ನ ನೋಡಿ, ಗಹಗಹಿಸಿದ ಭಾನು...
"ಬದುಕುವ ಗುಟ್ಟನರಿಯದ ಹೇ ನರನೇ,
ಇದೊ೦ದು ಪ್ರಶ್ನೆಯೇನು?"
ನಗುತ್ತಲೇ ಇದ್ದ ರವಿ, ಸುಮ್ಮನಿದ್ದೆ ನಾನು...

ಅವ ಮು೦ದುವರೆದ..
"ನಮ್ಮ ದ್ರವ್ಯವೇ ನಮ್ಮ ಅಸ್ತಿತ್ವ..
ನಮ್ಮ ನಡುವಿನ ಗುರುತ್ವವೇ ನಮ್ಮ ಅಧಾರ,
ನಮ್ಮನ್ನು ಹಿಡಿದಿಡುವ ಪ್ರೀತಿ...
ನಾನು ಬುವಿ ಚ೦ದ್ರ ತಾರೆ ಬೇರೆಯಿದ್ದರೂ
ಈ ಪ್ರೀತಿಯಿ೦ದಾಗಿ ನಾವು ಒ೦ದು...
ಮನುಜನ ಹಾಗಲ್ಲ ನಾವು...
ತೋರಿಕೆಯ ಅವಕಾಶವಾದಿ ಪ್ರೀತಿಯ ಬ೦ಧನದಲ್ಲಿ
ಒಡೆಒಡೆದು ಹೋಗುವ ಸಣ್ಣ ಸಣ್ಣ ಕುಟು೦ಬ ನಮ್ಮದಲ್ಲ...
ಹೋಗು ಪ್ರೀತಿಯಿ೦ದ ಒ೦ದಾಗಿ ಬಾಳು..."
ಎ೦ದು ಹೆಗಲು ತಟ್ಟಿ ನನ್ನ ಕಳುಹಿದ...

-೩-

ಥಟ್ಟನೇ ಎಚ್ಚರವಾಯ್ತು...
ತಲೆ ಭಾರವಾಗಿತ್ತು..
ಬಚ್ಚಲಲ್ಲಿ ನಿ೦ತು ಹಲ್ಲುಜ್ಜುತ್ತಿರುವಾಗ
ಎದುರಿನ ಕನ್ನಡಿಯಲ್ಲಿದ್ದ ನನ್ನ ಪ್ರತಿಬಿ೦ಬವ
ನಾನೇ ನ೦ಬದಾದೆ..!!
ನನ್ನ ಭುಜದ ಮೇಲೆ ಬೆರಳುಗಳ ಗುರುತು ಹೊಳೆಯುತ್ತಿತ್ತು...!!!

Monday 12 December 2011

ಒ೦ದು ಮಾಡಿದೆ ಪ್ರೇಮ...

ನಿನ್ನ ಬೆಚ್ಚನೆಯ ಉಸಿರಿಗೆ ಬಳುಕಲೇ ನಾ..
ಬಾ ಸನಿಹ ಸನಿಹ..
ನಿನ್ನ ತೋಳ ಬ೦ಧನದಿ ಕರಗಲೇ ನಾ
ಬಾ ಸನಿಹ ಸನಿಹ..   llಪll

ಬಾರದು ನಿದಿರೆ
ರಾತ್ರಿ ಹಗಲೆನ್ನದೇ,
ಒ೦ದೇ ಕಾಟ ನನಗೆ ಅನವರತ
ನಿನ್ನ ನೋಡಲೇ ಬೇಕೆನುತ....
ಕ೦ಡರೂ ಕಾಣದ೦ತಿರುವೆ,
ಅದೇ ಗೊ೦ದಲ ನನ್ನೊಳಗೆ..
ಬಾ ನಿರೂಪಿಸು ಅದು ನೀನೇ ಎ೦ದು...
ಬಾ ಸ್ಪರ್ಷಿಸು ನನ್ನೆದೆಗೆ ಬ೦ದು... ll 1 ll

ಮಧುರ ಲೋಕವ
ಕರೆದು ನನ್ನೆದುರು
ನೀ ಬಿಚ್ಚಿಟ್ಟೆ ಅದೆ೦ತು ನಾ ಹೇಳಲಿ...
ಕುಸುಮ ಮುಗುಳು ಬಿರಿಯಿತಲ್ಲ ನನ್ನ ಮನದ ಮರಳಲಿ...
ನನಗೆ ನಾ ಇಷ್ಟು ಸು೦ದರವಾಗಿ,
ನನಗೆ ನಾ ಇಷ್ಟು ಹತ್ತಿರವಾಗಿ,
ಇರಲಿಲ್ಲ ಹೀಗೆ ಹಿ೦ದೆ...
ಅದ್ಯಾವ ಮೋಡಿ ಮಾಡಿ ನೀ ಬ೦ದೆ...??   ll 2 ll

ಮೌನದ ಮೇರೆ ಮೀರಿ
ಮಾತು ಹೊಮ್ಮಿಸಿದೆ ಪ್ರೇಮ...
ಕತ್ತಲೆಯ ಗಡಿಯ ದಾಟಿ
ಬೆಳಕು ಚಿಮ್ಮಿಸಿದೆ ಪ್ರೇಮ...
ನಾನು ನೀನು ಬೇರೆ ಅಲ್ಲ,
ಒ೦ದು ಮಾಡಿದೆ ಪ್ರ‍ೇಮ...
ಒ೦ದು ಮಾಡಿದೆ ಪ್ರ‍ೇಮ...    ll 3 ll

Friday 9 December 2011

ಎರಡು ಹನಿಗಳು...

ವ೦ಚಕ...!

ಈ ಸಮಯ ಒಬ್ಬ ಭಾರೀ ವ೦ಚಕ...!!

ಪರೀಕ್ಷೆಯಲ್ಲಿ ಬರೆಯುವುದಕ್ಕೆ ಏನೂ ಇಲ್ಲದಿದ್ದಾಗ
ಮು೦ದೆ ಓಡುವುದೇ ಇಲ್ಲ ಖದೀಮ...
ಇನ್ನೂ ಬರೆಯುವುದಿದೆ ಸಾಕಷ್ಟು ಎನ್ನುವ೦ತಿದ್ದರೇ,
ಗ೦ಟೆ ಬಾರಿಸುತ್ತ ಮಾಯವಾಗುತ್ತಾನೆ ಶತಾಬ್ದಿಯ೦ತೆ...!!

ಈ ಸಮಯ ಈಗಲೂ ಅಷ್ಟೇ...

ಅವಳು ಬರುವಳೆ೦ದು ನಾ ಕಾಯುತ್ತಿರುವಾಗ
ಅಲಗುವುದೇ ಇಲ್ಲ ಗಡಿಯಾರದ ಮುಳ್ಳು...
ಹಾಗೆ ಮಳೆ ಬ೦ದು, ಅವಳೂ ಬ೦ದು,
ನನ್ ಸನಿಹ ನಿ೦ತಳೆ೦ದರೇ,
ಸ೦ಜೆಯೆನ್ನುವುದು ಎರಡು ಗ೦ಟೆಗಳ ಕಾಲ ಎನ್ನುವುದು
ಶುದ್ಧ ಸುಳ್ಳು...!!

***********************************************

ವಿಪರ್ಯಾಸ...

ಒಮ್ಮೊಮ್ಮೆ ಹೀಗೂ ಆಗುತ್ತದೆ...

ಒಬ್ಬರ ಬಗ್ಗೆ
ಅವರು ಇವರು
ಹೇಳಿದ್ದನ್ನು ಕೇಳಿ ಕೇಳಿ
ಮನಸ್ಸಿನಲ್ಲಿ ಅವರ ವ್ಯಕ್ತಿತ್ವ
ಆಕಾರ ಪಡೆದು
ಕಲ್ಪನೆಯ ಕಣ್ಗಳಲ್ಲಿ
ಸಾಕಾರವಾಗುತ್ತದೆ....

ಮು೦ದೊ೦ದು ದಿನ,
ಅವರನ್ನು ಮುಖಾಮುಖಿಯಾದಾಗ,
ಅವರೇ ಇವರೆ೦ದು ಮನಸ್ಸು
ಒಪ್ಪಿಕೊಳ್ಳುವುದೇ ಇಲ್ಲ...!!
ನಮ್ಮ ಕಣ್ಗಳನ್ನು ನಾವು ನ೦ಬುವುದೇ ಇಲ್ಲ...!!

Wednesday 7 December 2011

ಗೊ೦ಬೆ ಮದುವೆ...

ಹೂ ಮುಡಿಸಿ, ಬಳೆ ಇಡಿಸಿ,
ಜರಿಸೀರೆಯುಡಿಸಿ,
ಇದ್ದ ಹೆಣ್ಣು ಗೊ೦ಬೆಗಳಿಗೆಲ್ಲ
ಒಪ್ಪವಾಗಿ ಸಿ೦ಗರಿಸಿ,
ಯೋಗ್ಯ ಗ೦ಡು ಗೊ೦ಬೆಗಳ ಹುಡುಕಿ,
ಜೋಡಿ ಮಾಡಿ,
ಅಕ್ಷತೆಯೆರೆದಾಗ,
ಈ ಗ೦ಡು ಗೊ೦ಬೆಯ ಹಗಲು ರಾತ್ರಿಗಳು
ಲೆಕ್ಕವಿಲ್ಲದ೦ತೆ ಕಳೆದು ಹೋದವು...

ಆಗ,
ಮುದಿಗೊ೦ಬೆಯೊ೦ದು ಮು೦ದೆ ಬ೦ದು
ಈ ಗ೦ಡು ಗೊ೦ಬೆಯ ಲಗ್ನ ಮಾಡಬೇಕೆ೦ದು,
ಅಲ೦ಕಾರಕ್ಕಾಗಿ ಪ೦ಚೆ, ಶಲ್ಯ,
ಬಾಸಿ೦ಗ, ಕಾಡಿಗೆ, ಕು೦ಕುಮ ಇತ್ಯಾದಿ ತ೦ದು,
ತನ್ನ ಬೆರಳಲ್ಲಿ ಕಾಡಿಗೆ ಇಟ್ಟುಕೊ೦ಡಾಗ,
ಗ೦ಡು ಗೊ೦ಬೆಯ ಕೆನ್ನೆಯ ಮೇಲಿನ
ನೆರಿಗೆಗಳು ಆ ಮುದಿಗೊ೦ಬೆಗೆ ಕಾಣಲೇ ಇಲ್ಲ...!
"ದೃಷ್ಟಿಯಾಗದಿರಲೆ೦ದು ಬೇಡ, ಕಾಡಿಗೆಯನ್ನ ಈ ತಲೆಗೂದಲಿಗೆ ಹಚ್ಚು,
ಕಪ್ಪಾಗಿ ಕಾಣಲಿ" ಎ೦ದು ಗ೦ಡು ಗೊ೦ಬೆ ಅ೦ದದ್ದು
ಅರ್ಥವಾಗಲೇ ಇಲ್ಲ...!!

ಕಳೆಯುತ್ತಲೇ ಇದ್ದವು ಅನವರತ ದಿನಗಳು ಹೀಗೆ...
ಹಗಲು ರಾತ್ರಿ ಯಾವುದೆ೦ಬ ಲೆಕ್ಕ ತಪ್ಪಿ ಹೋಯಿತು ರವಿ, ಚ೦ದ್ರ, ಬುವಿಗೆ..
ಆದರೂ, ಗ೦ಡು ಗೊ೦ಬೆಗೆ ಹೆಣ್ಣೊದಗಲಿಲ್ಲ...!

ಒ೦ದು ದಿನ,
ನಡುವಯದ ಹೆಣ್ಗೊ೦ಬೆಯೊ೦ದು,
ಅರೆಮನದಿ ಒಪ್ಪಿ ಬ೦ದು,
ಗ೦ಡುಗೊ೦ಬೆಯೊ೦ದಿಗೆ ಕುಳಿತು ಮಾತನಾಡುವಾಗ,
ಇಬ್ಬರ ನಡುವೆ ನುಡಿಯಾದದ್ದು,
ಇಷ್ಟುದಿನ ಕ೦ಕಣ ಭಾಗ್ಯ ಕೂಡಿ ಬರದೇ ಇದ್ದ ವಿಷಯವೊ೦ದೇ...!
ಆಡಬೇಕಾಗಿದ್ದ ಉಳಿದ ಮಾತು
ಒಳಗೆಲ್ಲೊ ಕಳೆದು ಹೋದವು...

ಕೊನೆಗೆ ಆದದ್ದಿಷ್ಟೇ...
ಮದುವೆಯಾಗದೇ ಹೆಣ್ಗೊ೦ಬೆ ಅಜನ್ಮ ಮುತ್ತೈದೆಯಾಯಿತು...
ಬ೦ಧನಕ್ಕೊಳಪಡದೇ ಗ೦ಡ್ಗೊ೦ಬೆ ಅಜನ್ಮ ಬ್ರಹ್ಮಚಾರಿಯಾಯಿತು...

Wednesday 30 November 2011

ದೀಪ ಹಚ್ಚಿದವಳು...

ಅವತ್ತು,
ಗೆಳೆಯನ ಮದುವೆಯಲ್ಲಿ
ಪುರೋಹಿತರು "ಸುಲಗ್ನೇ ಸಾವಧಾನ" ಎ೦ದಾಗಲೂ,
ಗಟ್ಟಿಮೇಳದ ನಡುವೆ,
"ಮಾ೦ಗಲ್ಯ೦ ತ೦ತುನಾನೇನ" ಎ೦ದಾಗಲೂ,
ತಗ್ಗಿಸಿದ ಮೊಗದ ವಧು ನಸುನಗುತ್ತ
ನಾಚಿಕೆಯಲ್ಲಿ ಮುದ್ದೆಯಾದಾಗ,
ಓರೆಗಣ್ಣಲ್ಲಿ ಕದ್ದು ನೋಡುತ್ತಾ,
ಮುಗುಳ್ನಗುತ್ತಾ, ತಾಳಿ ಕಟ್ಟಿ,
ತನ್ನ ಬ್ರಹ್ಮಚರ್ಯದಿ೦ದ ಮುಕ್ತನಾಗಿದ್ದ ಗೆಳೆಯ...
 
ಆದರೆ,
ನನ್ನ ಮದುವೆಯ ದಿನದ೦ದು,
ಅದೇ ಮ೦ತ್ರಘೋಷಗಳಿದ್ದರೂ
ಅದೇ ಓಲಗವಿದ್ದರೂ,
ತಾಳಿ ಕಟ್ಟುವಾಗ ನನ್ನ ವಧುವಿನ ಕಣ್ಣಿ೦ದ ಬಿದ್ದ ಹನಿ
ಅವಳ ಕೆನ್ನೆಯನ್ನಡರಿದಾಗ,
ಎದೆಯಲ್ಲಿ ಮಿ೦ಚು ಸ೦ಚಲಿತವಾಗಿ
ವಿಚಲಿತನಾಗಿದ್ದೆ...
ಕಣ್ಣ ಸನ್ನೆಯಲ್ಲೇ ಏನೆ೦ದು ಕೇಳಿದಾಗ
ಮೂಗನ್ನೊರೆಸಿಕೊ೦ಡು ಮೊಗ ಕೆ೦ಪಾಗಿಸಿ
ತಲೆಯಲ್ಲಾಡಿಸಿದ್ದಳು ಚೆನ್ನೆ...
 
ನ೦ತರ ಸ೦ಜೆ,
ಅವಳನ್ನ ಮನೆ ತು೦ಬಿಸಿಕೊ೦ಡು
ಆಟಿಕೆಯ ತೊಟ್ಟಿಲ ತೂಗಿ,
ನಮ್ಮೂರಿಗೆ ಸಾಗಿ ಬರುವಾಗ
ನನ್ ಹೆಗಲಿಗೆ ತಲೆಯಿಟ್ಟು ಅವಳು ಒರಗಿದಾಗ
"ಏಕೆ ಆಗ ಕಣ್ಣೀರು?" ಎ೦ದು ಪಿಸುಗುಟ್ಟಿದ್ದೆ..
"ನೀವು ನಿಮ್ಮ ಹುಟ್ಟಿದ ಮನೆಯನ್ನು,
ಮನೆಯವರನ್ನೂ ಶಾಶ್ವತವಾಗಿ ಬಿಟ್ಟು ಬನ್ನಿ,
ಗೊತ್ತಾಗುತ್ತೆ.." ಎ೦ದು ಮುಗುಳ್ನಕ್ಕು,
ನನ್ನ ಬಾಳಲ್ಲಿ ಒಲವ ದೀಪ ಹಚ್ಚಿದ್ದಳು ಚೆನ್ನೆ...


Sunday 27 November 2011

ನರ್ತನ...

ಆಡುತ್ತಾಳೆ ಅವಳು
ನಡೆಯುತ್ತಾಳೆ, ಓಡುತ್ತಾಳೆ,
ತಿರುವುತ್ತಾಳೆ ಕೈ,
ಬಳುಕಿಸುತ್ತಾಳೆ ಮೈ
ಬಿ೦ಕವ ತು೦ಬಿ....
ಹಾಗೆಯೇ,
ಮಾಡುತ್ತಾಳೆ ಕೆಲಸವನೇಕ...
ಅನ್ನುತಾರೆ ಅವಳನ್ನೋಡಿದವರೆಲ್ಲರೂ
ಅವಳು ಕುಣಿಯುತ್ತಾಳೆ - ನರ್ತಕಿ...

ಆವಳ ಆ ಲಯಕ್ಕೆ,
ಕುಣಿಯುತ್ತದೆ ಅವಳ ಗೊ೦ಡೆಕಟ್ಟಿದ ಚವರೀ ಜಡೆ...
ವಿಭಿನ್ನವಾಗಿ ಹೆಜ್ಜೆ ಹಾಕುತ್ತದೆ ಕಿವಿಯ ಜುಮ್ಕಿ ಅವಳ ಕೆನ್ನೆಯ ಕಡೆ...
ಕುಣಿಯುತ್ತವೆ ಅವಳ ಕಣ್ಣು ನವಿಲುಗಣ್ಣಾಗಿ...
ಅವಳನ್ನೆ ಮೀರಿಸಿ ನಲಿಯುತ್ತವೆ ಅವಳ
ಸೀರೆಯ ನೇರಿಗೆಗಳು ಹರಿವ ಝರಿಯಾಗಿ...
ತನ್ನ ನರ್ತನದಿ೦ದ ಹೊಮ್ಮಿಸುತ್ತಾಳೆ
ಸ೦ಗೀತ ನಾದಸುರಭಿ - ಇವಳೊಬ್ಬ ಮಾಟಗಾತಿ...

ಕುಣಿಯುವುದೆ೦ದರೇ...
ಬರೀ ಮೈಕೈ ಆಡಿಸುವ೦ಥದಲ್ಲ..!
ತನ್ಮಯಾರಾಗಬೇಕು ಮೈ ಮನಸ್ಸು ತು೦ಬಿ ಅದರಲ್ಲಿ...
ಪ್ರೇರೇಪಿಸಬೇಕು ನಲಿಯಲು ಸುತ್ತಲಿನ ಜಗತ್ತನ್ನು,
ಮತ್ತೆ ಆ ಜಗತ್ತು ನಮ್ಮನ್ನು...
ಮೈಮರೆಯಬೇಕು ತ೦ಗಾಳಿಗೆ ತೂಗುವ ಬಳ್ಳಿಯ೦ತೆ...
ಮೊದಲ ಮಳೆಗೆ ತಣಿಯುವ ನವಿಲಿನ೦ತೆ...
ಸಮಾದಿಸ್ಥನಾಗಬೇಕು ನೃತ್ಯಸುಖ ಹರಡಿ...

ಹೆಜ್ಜೆಗೆ ಹೆಜ್ಜೆ,
ನೋಟಕೆ ನೋಟ,
ಮುದ್ರೆಗೆ ಮುದ್ರೆ,
ಉಸಿರಿಗೆ ಉಸಿರು,
ಬಳಕಿಗೆ ಬಳಕು,
ಹೀಗೆ... ಇವೆಲ್ಲ
ಒ೦ದರ ಹಿ೦ದೆ ಒ೦ದು ಹರಿಯಬೇಕು,
ಒ೦ದೇ ಲಹರಿಯಲ್ಲಿ,
ಆನ೦ದದಲ್ಲಿ ಮುಳುಗಿ...

Wednesday 23 November 2011

ಕಳೆದು ಹೋಗುತ್ತಿದೆ...

ರಸ್ತೆಯ ಸಿಗ್ನಲ್ಲಿನಲ್ಲಿ ನಿ೦ತ
ಸ್ಕೂಲ್ ವ್ಯಾನಿನಲ್ಲಿ ಕ೦ಡ
ಆ ಪುಟಾಣಿ ಹೊಳೆವ ಕಣ್ಗಳ ಮಿ೦ಚು,
ಈ ನಗರೀಕೃತ ನಾಗರೀಕತೆಯ
ಗೋಡೆಗಳ ನಡುವೆ
ಹೋಗುತ್ತಿದೆ ಕಳೆದು....

ಆಫೀಸಿನ ತಾರಸಿಯಲ್ಲಿ
ಮಧ್ಯಾಹ್ನ ಊಟ ಮಾಡುವಾಗ
ಪಕ್ಕದ ಮರಕ್ಕೆ ಬ೦ದ
ಕೆ೦ಪು ಚೊ೦ಚಿನ ಗಿಣಿ ಕೂಗಿದ್ದು
ಎದುರಿನ ರಸ್ತೆಯ ಟ್ರಾಫಿಕ್ ಭರಾಟೆಯಲ್ಲಿ
ಹೋಗುತ್ತಿದೆ ಕಳೆದು....

ಬೈಗಿ೦ದ ರಾತ್ರಿಯವರೆಗೆ
ಕಾಲದ ವೇಗವನ್ನೇ ಮೀರುವ೦ತೆ
ಓಡುವ ಜನರ ಈ ಓಟದ ನಡುವೆ,
ಸೂರ್ಯೋದಯದ ಆ ಹೊ೦ಬೆಳಕ ಸ್ನಾನ...
ಕಾಡಿನ ಗರ್ಭದ ನೀರವ ಧ್ಯಾನ...
ಗರಿಕೆಯ ಎಸಳಿನ ಹೊಳೆವ ಮ೦ಜಹನಿ...
ನೀರೊಲೆಯ ಹೊಗೆಯುಗುಳಿಸಿದ ಕಣ್ಪನಿ...
ಕರೆಯಲ್ಲಿ ಕಲ್ಲೆಸೆದಾಗೆದ್ದ ಅಲೆಯೊಳಗಿನ ಅಲೆಗಳು...
ಹೂಗಳರಳಿ ಹಾಸಿದ ಸುಹಾಸನೆಯ ಬಲೆಗಳು...
ಎಲ್ಲ..., ಎಲ್ಲ ಹೋಗುತ್ತಿವೆ ಕಳೆದು....

ತಮ್ಮದೇ ಕಣ್ಣೊಳಗೆ ಹೂಕ್ಕು
ತಮ್ಮ ಒಳಮನವನರಿವಲ್ಲಿ ಸೋತು
ಜನ ತಮ್ಮನ್ನೇ ಕೊಳ್ಳುತ್ತಿದ್ದಾರೆ ಕಳೆದು....

ಈ ಪ್ರೊಜೆಕ್ಟು, ಮೀಟಿ೦ಗು,
ಡೆಡ್ಲೈನು, ಕ್ಲೈ೦ಟ್ಸು, ಕಾಲ್ಸು...
ಈ ಗದ್ದಲಗಳ ನಡುವೆ ನನಗೆ ಇವೆಲ್ಲ ಕ೦ಡವಲ್ಲ..!!
ಆಶ್ಚರ್ಯ...!!
ಇನ್ನು ಬಹುಶಃ ನನ್ನ ಕೆಲಸ ಹೋಗುತ್ತೆ ಕಳೆದು...!

Tuesday 8 November 2011

ಹೀಗೊ೦ದಿಷ್ಟು ಆಶಯಗಳು...

ಹೊಸ ಮರ್ಸಿಡೀಸ್ ನ ಗಾಲಿಗಳಿಗೆ
ತಗ್ಗು ದಿಣ್ಣೆಗಳ ದಾರಿ ಸಿಗದೇ ಇರಲಿ...
ಅಕ್ಕ ಪಕ್ಕದ ಗಾಡಿಗಳ ನಡುವೆ ಸುರಕ್ಷಿತ ಅ೦ತರವಿರಲಿ,
ಮೈಗೆ ಡೆ೦ಟು, ಸ್ಕ್ರ್ಯಾಚು ಆಗದ೦ತಿರಲಿ...

ಕೂಗಿ, ರೋಗಿಯ ಕೊ೦ಡೊಯ್ಯುವ ಆ೦ಬುಲನ್ಸ್ ಗೆ
ಟ್ರಾಫಿಕ್ ಜಾಮ್ ಅಡತಡೆಯಾಗದಿರಲಿ...
ಖಾಲಿ ಸಾಗುವ ಆ೦ಬುಲನ್ಸ್ ಕೂಗದಿರಲಿ,
ರಸ್ತೆಯಲ್ಲಿ ಇತರರಿಗೆ ಸಮಸ್ಯೆಯಾಗದಿರಲಿ...

ಕಡು ಕತ್ತಲೆಯಲ್ಲಿ ಬೆಳಕಿನಾಸರೆ ಬಯಸುವವಗೆ
ಮಿ೦ಚುಹುಳುವಿನ ಸ್ನೇಹವಾದರೂ ದೊರೆಯಲಿ...
ಮಾತು ಮೌನವಾದಾಗ, ಮೌನ ಮರಗಟ್ಟಿದಾಗ,
ಕಣ್ಣಿ೦ದ ಭಾವ ಹರಿದು, ಗುರಿ ಸೇರುವ೦ತಿರಲಿ...

ಮಿಡಿದ ಭಾವಕೆ, ಹರಿದ ಭಾವಕೆ,
ಒಲಿದ ಜೀವದ ಆಶ್ರಯ ಸಿಗುತ್ತಿರಲಿ...
ರಾತ್ರಿ ಒ೦ಟಿಯಾಗಿ ಕಾಡದಿರಲಿ,
ಸ೦ಗಾತಿಯ ಬೆಚ್ಚನೆಯ ಪ್ರೀತಿಯ ಒರೆತಗಳಿರುತಿರಲಿ...

ಬೇಕಾದ್ದು ಬೇಕಾದಾಗ, ಬೇಡವಾದ್ದು ಬೇಡವಾದಾಗ
ರಕ್ಷಾಕವಚದ ರಕ್ಷೆ ದೊರೆಯುತಿರಲಿ...
ತಿಪ್ಪೆಗು೦ಡಿಗಳಲ್ಲಿ ಕಸದ ಜೊತೆ
ಹಸುಗೂಸುಗಳು ದೊರೆಯದೇ ಇರಲಿ...

Wednesday 2 November 2011

ಬೆಳಕಿನ ಅರಿವಿಗೆ ಬೇಕು ಕತ್ತಲು...

ನಾನು ಬೆಳಕನ್ನು ಪ್ರೀತಿಸುವವ...
ಬೆಳಕು-ಕತ್ತಲೆಯ ಈ ನಿಗೂಢ ಲೋಕದಲ್ಲಿ,
ಒ೦ದು ದಿನ ಬೆಳಕಿನಾಗರನಾದ ಸೂರ್ಯನ
ಕಣ್ಣಲ್ಲಿ ಕಣ್ಣಿಟ್ಟು ನೋಡುವ ಧೈರ್ಯ ಮಾಡಿದೆ...
ನೋಡ ನೋಡುತ್ತಯೇ ಆತನ ಬಣ್ಣ ಬದಲಾಗುತ್ತ ಹೋಯಿತು,
ಬಿಳಿಯಿ೦ದ ಹಳದಿ, ಕೇಸರಿ, ಕೆ೦ಪು, ನೇರಳೆ, ನೀಲಿ...
ಹೀಗೆ ಅನ೦ತ ಬಣ್ಣಗಳು ಕಣ್ಣ ಕುಕ್ಕಿದವು.
ಜ್ಞಾನವೇ ಬೆಳಕು, ಸುಖವೇ ಬೆಳಕು ಎ೦ದು ನ೦ಬಿದವ ನಾನು,
ಸೂರ್ಯನಿ೦ದ ಕಣ್ಣನ್ನು ತೆರೆಯಲೇ ಇಲ್ಲ..
ಕಣ್ಣು ಆಗ ಭಾಷ್ಪಿಸಿದವು,
ಸೂರ್ಯೋದಯದ ನ೦ತರ ಹೂ ಎಲೆ ಭಾಷ್ಪಿಸುವ೦ತೆ...

ತುಸು ಹೊತ್ತಲ್ಲಿ ತಡೆಯಲಾಗಲಿಲ್ಲ
ಕಣ್ಣನ್ನು ಬೇರೆಡೆಗೆ ಹರಿಸಬೇಕಾಯಿತು...
ಬೆಳಕನ್ನು ಕಣ್ಣಲ್ಲಿ ತು೦ಬಿಕೊ೦ಡವನಿಗೆ
ಸುತ್ತಲಿದ್ದ ಮರ, ನೆಲ, ಹಕ್ಕಿ, ನೀರು ಏನೂ ಕಾಣುತ್ತಿಲ್ಲ...!
ಕತ್ತಲಾಗಿದೆಯೇ? ಪ್ರಶ್ನೆ ಹರಿದಾಡಿತು
ಆದರೆ ಸೂರ್ಯನ ಇರುವು ಇನ್ನೂ ಮೈಗೆ ಅರಿವಾಗುತ್ತಿತ್ತು...

ಎಲ್ಲೋ ಕೇಳಿದ್ದ ಮಾತುಗಳು ಆಗ ಕಿವಿಯಲ್ಲಿ ಗುಯ್ಗುಟ್ಟಿದವು
"ಕತ್ತಲೆಯಿ೦ದ ಬೆಳಕಿಗೆ, ಬೆಳಕಿನಿ೦ದ ಕತ್ತಲೆಗೆ
ಹೊ೦ದಿಕೊಳ್ಳಲು ಕಣ್ಣಿಗೆ ಸಮಯ ಬೇಕು"...
- ಅದು ಕಣ್ಣಿನ ಮಿತಿ,
ಅಷ್ಟೇ ಅಲ್ಲ,
ಅದು ಬೆಳಕಿನ ಮಿತಿಯೂ ಹೌದು,
ಕತ್ತಲೆಯ ಮಿತಿಯೂ ಹೌದು...
ಅದಕ್ಕೆ, ಕತ್ತಲೆಯ ಅರಿವಿಗೆ ಬೇಕು ಬೆಳಕು
ಹಾಗೆಯೆ, ಬೆಳಕಿನ ಅರಿವಿಗೆ ಬೇಕು ಕತ್ತಲು...

Saturday 29 October 2011

ನಿರಾತ೦ಕ ದೀಪ

ಮುಸ್ಸ೦ಜೆಯ ಮಬ್ಬಿನಲಿ
ಮುಳುಗುತಿರಲು ಲೋಕವು,
ಗುಡಿಯಲೊ೦ದು ಬೆಳಗಿತು
ನಿರಾತ೦ಕ ದೀಪವು.

ಸುಳಿಗಾಳಿಯು ಜೋರಾಯಿತು
ಬ೦ತೇ ಅದಕೆ ಕೋಪವು?
ದೇವರೆದುರು ನಿ೦ತಾಯಿತು
ನಿರಾತ೦ಕ ದೀಪವು.

ಅಲುಗುತಿಲ್ಲ ಹೆದರಿತಿಲ್ಲ
ಸ್ಥಿರ ಬೆಳಕಿನ ಜ್ಯೋತಿಯು
ಫಲಕದಲ್ಲರಳಿದ ಕಲೆ
ನಿರಾತ೦ಕ ದೀಪವು.

ಬಹು ಆಯಾಮದ ಪ್ರಭೆಯ ಕೋಶ
ನಿರಾತ೦ಕ ದೀಪವು.
ಬ೦ಧಗಳಿಗೆ ಬ೦ಧ ಕಟ್ಟಿ
ಹರಡುತ್ತಿತ್ತು ಪ್ರೀತಿಯು.

ದೀಪವಿರೆ ದೇವರಿಹನು
ಭಕ್ತಿ ಮನದಿ ಮೊಳಗಲು.
ಅವನಸ್ತಿತ್ವಕೆ ಸಾಕ್ಷಿಯು
ನಿರಾತ೦ಕ ದೀಪವು.

ಬೆಳಕೆ ಶಕ್ತಿ, ಬೆಳಕೆ ಯುಕ್ತಿ
ಬೆಳಕಿನಲ್ಲೆ ಪ್ರೇಮವು.
ಸಕಲ ಕಷ್ಟಗಳಿಗೆ ಮುಕ್ತಿ
ನಿರಾತ೦ಕ ದೀಪವು.

ಕೂಗದೆಯೆ ತಿಳಿಸುತ್ತಿತ್ತು
ಹೊನ್ನುಡಿಗಳ ನೀತಿಯು.
ಶ್ರೀ ಕೃಷ್ಣನ ಗೀತೆಯ೦ತೆ
ನಿರಾತ೦ಕ ದೀಪವು.

ಹೊಳೆಯುತಿರಲು ಬೆಳಗುತಿರಲು
ನಿರಾತ೦ಕ ದೀಪವು.
ಕಾಣ್ವೆ ನಾನು ನನ್ನವಳ
ಕಣ್ಗಳಲಿ ನಿತ್ಯವು.

Friday 21 October 2011

ಹೀಗೊ೦ದು ಆತ್ಮಹತ್ಯೆ... ಹೀಗೊ೦ದು ಹತ್ಯೆ...

ಆತ್ಮಹತ್ಯೆ

ಎಷ್ಟೋ ಸಾರಿ,
ಅದೆಷ್ಟೋ ಮನದೊಳಗಣ ಭಾವಗಳು
ಅಕ್ಷರ ರೂಪದಲ್ಲಾಗಲಿ, ಶಬ್ದ ರೂಪದಲ್ಲಾಗಲಿ
ಮೂರ್ತವಾಗುವುದೇ ಇಲ್ಲ...
ಕಾಲದ ತೆಕ್ಕೆಯಲ್ಲಿ ಮರೆಯಾಗಿಬಿಡುತ್ತವೆ....
ಈ ರೀತಿ ಭಾವಗಳು ನನ್ನೊಳಗೆ ಕಾಲವಾಗುವುದೆ೦ದರೇ,
ನಾನು ಬಾರಿ ಬಾರಿ ಆತ್ಮಹತ್ಯೆ ಮಾಡಿಕೊ೦ಡ೦ತೆ ಅನ್ನಿಸುತ್ತದೆ....

 ಹತ್ಯೆ

ಎಷ್ಟೋ ಸಾರಿ,
ಅದೆಷ್ಟೋ ಮನದೊಳಗಣ ಭಾವಗಳು
ಅಕ್ಷರ ರೂಪದಲ್ಲಾಗಲಿ, ಶಬ್ದ ರೂಪದಲ್ಲಾಗಲಿ
ಮೂರ್ತವಾದಾಗ,
ಕೇಳುವ ಕಿವಿಗಳಿಗೆ ಕೇಳಿಸಿದರೂ ಕೇಳುವುದಿಲ್ಲ,
ಕಾಣುವ ಕ೦ಗಳಿಗೆ ಕ೦ಡರೂ ಕಾಣುವುದಿಲ್ಲ...
ಉಪೇಕ್ಷೆಯಲ್ಲೇ ಅವುಗಳ ಅವಸಾನವಾಗುತ್ತದೆ...
ನನ್ನೆದೆ ಬಡಿದುಕೊಳ್ಳುತ್ತಿದ್ದರೂ, ಉಸಿರಾಡುತ್ತಿದ್ದರೂ,
ಭಾವಗಳ ಜೊತೆ ನನ್ನ ಹತ್ಯೆಯೂ ಆದ೦ತೆ ಅನ್ನಿಸುತ್ತದೆ....

Tuesday 18 October 2011

ಆಶ್ಚರ್ಯವಾಗುತ್ತೆ...!

ಆಶ್ಚರ್ಯವಾಗುತ್ತೆ...!
ಅದ್ಹೇಗೆ ನೀನು ನಿಶ್ಶಬ್ದ ಮೌನ ನಿರ್ವಾತದಲ್ಲೂ
ನಕ್ಕು ಮಾತನಾಡಬಲ್ಲೆಯೆ೦ದು...

ಆಶ್ಚರ್ಯವಾಗುತ್ತೆ...!
ಅದ್ಹೇಗೆ ನೀನು ಕೊರೆವ ಕತ್ತಲೆ೦ಧಕಾರದಲ್ಲೂ
ಕಣ್ಣರಳಿಸಿ ನಕ್ಕು ಹೊ೦ಬೆಳಕ ಬೀರಬಲ್ಲೆಯೆ೦ದು...


 ಮನದ ಭಾವಗಳೆಲ್ಲ ಉರಿದು
ಬೂದಿಯಷ್ಟೇ ಉಳಿದ ಸ೦ದರ್ಭದಲ್ಲೂ,
ಹೆಜ್ಜೆಯೊ೦ದು ಮು೦ದಿಡಲಾಗದೆ ಕುಸಿದು
ಶಕ್ತಿಗು೦ದಿದ ವೇಳೆಯಲ್ಲೂ,
ಮನವ ನಾಟುವ ಮ೦ದಹಾಸದ
ನಿನ್ನ ನೋಟದಿ೦ದ ಪುಳಕಗೊಳ್ಳುತ್ತೇನೆ,
ನಗುತ್ತೇನೆ, ಅಳುತ್ತೇನೆ, ಓಡುತ್ತೇನೆ, ನಿಲ್ಲುತ್ತೇನೆ...
ಆಶ್ಚರ್ಯವಾಗುತ್ತೆ...!

ನಿದ್ದೆ ಬಾರದೆ ಕಾಡುವ
ಅನ೦ತರಾತ್ರಿಯಲ್ಲಿ ನಿನ್ನ ನೆನೆದು
ಸವಿಗನಸು ಕಾಣುತ್ತೇನೆ೦ದರೆ....
ಸ೦ತೆಯ ಜನನಿಬಿಡ ರಸ್ತೆಯಲ್ಲಿ
ನಿನ್ನ ನೆನಪುಗಳಿ೦ದ ಏಕಾ೦ಗಿಯಾಗುತ್ತೇನೆ೦ದರೆ....
ಸಾಲು ಮರಗಳ ರಸ್ತೆಯಲ್ಲಿ
ಒ೦ಟಿ ಸಾಗುವಾಗ ನಿನ್ನ ನೆನೆದು
ನನ್ನ ಒ೦ಟಿತನವ ಕಳೆದುಕೊಳ್ಳುತ್ತೇನೆ೦ದರೆ....
ಆಶ್ಚರ್ಯವಾಗುತ್ತೆ...!

ನೀ ಇದ್ದರೂ, ಇರದಿದ್ದರೂ,
ನೀ ನನ್ನ ಆವರಿಸುವ ಪರಿ ಕ೦ಡು
ಆಶ್ಚರ್ಯವಾಗುತ್ತೆ...!
!

Friday 23 September 2011

ನೀನು ನಾನು...

ಹೇಳೋದು ಏನಿಲ್ಲ,
ತಿಳಕೊ೦ಡಿ ನೀ ಎಲ್ಲ,
ನಾ ತಳ ಕಾಣೋ ತಿಳಿ ನೀರಿನ ಕೊಳ...
ನನಗ ನೀ ಹೇಳಬೇಕ೦ತಿಲ್ಲ,
ನನಗ ನೀ ಗೊತ್ತೆಲ್ಲ,
ನೀ ನನ್ನ ಸುತ್ತ ನಿ೦ತಕೊ೦ಡ ಗಟ್ಟಿ ನೆಲ...

ನಾ ಮಾತಾಡಿದಾಗೆಲ್ಲ,
ತೆರಿ ತೆರಿಗಳು ಎದ್ದಾವು,
ಸುಳಿದಾವು ನೀ ಎ೦ಬೋ ದಡದ ಕಡೆಗೆ...
ಇಟ್ಟುಕೋ ಬೇಕಾದರ,
ಬಿಟ್ಟುಕೋ ಬಿಟ್ಟರ,
ನಿ೦ತದ ಭಾವ, ಮಾತು ಮರೆಗೆ...

ದಡದ ಪಚ್ಚ ಹಸಿರ,
ಸುಳಿದ ಮರ ನೆರಳ,
ನೀನಾಗಿ ಸುತ್ತಲ ಆವರಿಸಿ...
ತೂಗುತ್ತ ಬಳಕುತ್ತ,
ನೀ ಬಗ್ಗಿ ನೋಡ ಒಳಗ,
ನಿನ್ನನ್ನ ತೋರೇನು ನನ್ನ ಅರಸಿ...

ಕೊಳದಿ೦ದಲೇ ದಡ,
ದಡವಿದ್ದದ್ದಕ್ಕ ಕೊಳ,
ಹೊಳೆವ ಕನ್ನಡಿ ಹಾ೦ಗ ಈ ಕಾಡಿನ್ಯಾಗ...
ನಿನ್ನಿ೦ದಲೇ ನಾನು,
ನನ್ನಿ೦ದಲೇ ನೀನು,
ಒಬ್ಬರಿಗೊಬ್ಬರು ನಾವು ಈ ಬಾಳಿನ್ಯಾಗ...

Wednesday 21 September 2011

ಅಪ್ಪ ಅಮ್ಮ

ಅ೦ದು
ನಾ ಅ೦ಬೆಗಾಲಿಡುತ್ತ ಹಾಗೆ
ಮೊದಲಸಲ ಎದ್ದು ಓಡಿದ್ದು ನನಗೆ ನೆಪ್ಪಿಲ್ಲ.
ಅದನ್ನು ನೆನೆದಾಗಲೆಲ್ಲ,
ಅಪ್ಪ ಅಮ್ಮನಿಗೆ ಈ ಮುದಿತನದಲ್ಲೂ
ಎದ್ದು ಓಡುವ ಹುಮ್ಮಸ್ಸು...

ಅ೦ದು
ಹಾಲು ಹಲ್ಲುಗಳ ನಡುವೆ
ತುಟಿ ಕಚ್ಚಿ ನಾ ಅಪ್ಪ ಎ೦ದು
ಮೊದಲಸಲ ಉಸುರಿದ್ದು ನೆಪ್ಪಿಲ್ಲ.
ಅದನ್ನು ನೆನೆದಾಗಲೆಲ್ಲ ಅಪ್ಪನ
ಕಣ್ಣ೦ಚಲೊ೦ದು ಆನ೦ದದ ಮಿ೦ಚು...

ಇ೦ದು
ಅಪ್ಪನಿಗೆ ಮ೦ಡಿನೋವು,
ಅಮ್ಮನಿಗೆ ಸೊ೦ಟದ ಸಮಸ್ಯೆ,
ಅಪ್ಪನಿಗೆ ನೆಲಕ್ಕೆ ಕುಳ್ಳಲಿಕ್ಕಾಗುವುದಿಲ್ಲ,
ಅಮ್ಮನಿಗೆ ಬಗ್ಗಲಿಕ್ಕಾಗುವುದಿಲ್ಲ...

ಆದರೆ,
ಅಮ್ಮನ ಅಡುಗೆಗೆ ಇ೦ದಿಗೂ ಅದೇ ರುಚಿ...
ಅಪ್ಪನ ಕಾಳಜಿಯ ನೇವರಿಕೆಗೆ ಇ೦ದಿಗೂ ಅದೇ ಬಿಸಿ...

Tuesday 20 September 2011

ಡಾ. ಚ೦ದ್ರಶೇಖರ ಕ೦ಬಾರರಿ೦ದ ಕನ್ನಡಕ್ಕೆ ಎ೦ಟನೇ ಜ್ಞಾನಪೀಠದ ಗರಿ



ಕನ್ನಡಿಗರೆಲ್ಲರಿಗೂ ಇದೊ೦ದು ಹೆಮ್ಮೆಯ ವಿಷಯ. ಈಗ ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ ಭಾಷೆ ಕನ್ನಡ. ಅಪ್ಪಟ ದೇಸಿ ಡಾ. ಚ೦ದ್ರಶೇಖರ ಕ೦ಬಾರರಿಗೆ ಜ್ಞಾನಪೀಠ ಪ್ರಶಸ್ತಿ ಸ೦ದಾಯವಾಗುತ್ತಿದೆ. ಕಾವ್ಯ, ಮಹಾಕಾವ್ಯ, ನಾಟಕ, ಕಾದ೦ಬರಿ, ಸ೦ಶೋಧನೆ, ಚಿತ್ರರ೦ಗ ಇತ್ಯಾದಿಗಳಲ್ಲಿ ತಮ್ಮ ವಿಶಿಷ್ಟ ಛಾಪನ್ನು ಮೂಡಿಸಿದವರು ಕ೦ಬಾರರು. ಈ ಸ೦ದರ್ಭದಲ್ಲಿ ಅವರ ಬೆಳ್ಳಿಮೀನು ಸ೦ಕಲನದಿ೦ದ ಆಯ್ದ ಒ೦ದು ಕವನವನ್ನು ನನ್ನ ಬ್ಲಾಗಲ್ಲಿ ಹಾಕುತ್ತಿದ್ದೇನೆ.


ಆ ಮರ ಈ ಮರ

ಹೊ೦ಡದ ದ೦ಡೆಯ ಮೇಲೆ ಒ೦ದು ಮರ
ಹೊ೦ಡದಲ್ಲಿ ಒ೦ದು ಮರ.

ಮೇಲೆ ನಿಜವಾದ ಮರ
ಕೆಳಗೆ ಬಿ೦ಬಿಸಿದ ಮರ.

ತೆರೆ ಎದ್ದಾಗ
ಒ೦ದು ನಡುಗುತ್ತದೆ.
ಇನ್ನೊ೦ದು ನಗುತ್ತದೆ.

ಆದರೂ ನೆಪ್ಪಿರಲಿ
ತುದಿಗಳು ಎರಡಾದರೂ
ಬೇರು ಒ೦ದೇ ಈ ಮರಗಳಿಗೆ.

ನೀನೊ೦ದು ಮರ ಹತ್ತಿದರೆ
ಇನ್ನೊ೦ದರಲ್ಲಿ ಇಳಿಯುತ್ತಿ
ತಲೆ ಮೇಲಾಗಿ ಹತ್ತುತ್ತೀಯ
ತಲೆ ಕೆಳಗಾಗಿ ಇಳಿಯುತ್ತೀಯ.

ಹತ್ತುತ್ತ ಹತ್ತುತ್ತ ಗಾಳಿಯಾಗುತ್ತಿ ಅ೦ತ ತಿಳಿ
ಆದರೂ ನೆಪ್ಪಿರಲಿ ಕೆಳಕ್ಕಿಳಿವ ಕರ್ಮ ತಪ್ಪಿದ್ದಲ್ಲ.
ಹತ್ತೋದು ನಿನ್ನ ಕೈಲಿದ್ದರೂ
ಇಳಿಯೋದು ನಿನ್ನ ಕೈ ಮೀರಿದ್ದು.

ಹತ್ತಿದವರು ಸ್ವರ್ಗ ಸೇರುವರೆ೦ದು ಸುದ್ದಿ
ನಮಗದು ಖಾತ್ರಿಯಿಲ್ಲ.
ಮುಳುಗಿದವರಿಗೆ ಪಾತಾಳ ಖಚಿತ
ಬೇಕಾದಾಗ ಖಾತ್ರಿ ಮಾಡಿಕೊಡಬಹುದು.

ಈ ಕಥೆಯ ದುರ೦ತ ದೋಷ ಯಾವುದೆ೦ದರೆ
ನಿಜವಾದ ಮರ ಮತ್ತು
ನೀರಿನ ಮರ
ಇವೆರೆಡೂ ಒ೦ದಾದ ಸ್ಥಳ
ಮಾಯವಾಗಿರೋದು.

ಅದ್ಕ್ಕೆ ಹೇಳುತ್ತೇನೆ ಮಿತ್ರಾ-
ಮ್ಯಾಲಿ೦ದ ಜಿಗಿದು
ತಳಮುಟ್ಟಿ ಮ್ಯಾಲೆದ್ದು
ನೆಲ ಹುಡುಕೋಣ ಬಾ.

Wednesday 14 September 2011

ಬಾ ಸಖೀ.. ಬಾ ಸಖೀ...


ಕೇಳೇ ಸಖೀ, ನನ್ನೊಲವೇ...
ಸಮಯ ಕಳೆಯುತಿದೆ ಬಾ ಬಳಿಗೆ....

ಜನ್ಮ ಜನ್ಮಾ೦ತರದ ಪ್ರೇಮ ನಮ್ಮದು
ಕಾಲದ ಮೇರೆ ಇದಕಿಲ್ಲ...
ಅ೦ದಿನ ಕೃಷ್ಣ ರಾಧೆ ನಾನೆ ನೀನೇ
ಬೇರೆ ಪುರಾವೆ ಬೇಕಿಲ್ಲ...
ನೆನಪಿಲ್ಲವೇನೇ..?
ಆ ಬನ, ಯಮುನೆ...

ನಿನ್ನ ಪ್ರತೀಕ್ಷೆಯಲಿ ಸೋತಿದೆ ಕಾಲ
ಕಾಯುವ ನೋವು ನನಗಿಲ್ಲ...

ಪಡುವಣ ಬಾನಲಿ ಶ್ಯಾಮಲಗೆ೦ಪು
ಇಳಿದಿಳಿದಿಳಿದು ಇಳಿಯುತಿದೆ...
ಮೂಡಣದಲ್ಲಿ ಮೂಡಿದ ಚ೦ದಿರ
ಚ೦ದ್ರಿಕೆಯನ್ನು ಚೆಲ್ಲುತಿದೆ...
ಎಲ್ಲಿರುವೆಯೋ ನೀ..?
ಕೇಳದೇನೀ ಧನಿ..?

ನೀ ಬರದೆ ನನ್ನೀ ಹೃದಯ
ವಿರಹದುರಿಯಲಿ ಬೇಯುತಿದೆ...

ಬಾ ಸಖೀ.. ಬಾ ಸಖೀ...

Monday 5 September 2011

ಬಿಸಿಲುಕೋಲು...

ಸೂರ್ಯರಶ್ಮಿಯು ಹಾಗೆ ನುಸುಳುತಿದೆ
ಕೋಣೆಯೊಳಗೆ ಜಾರಿ,
ಈ ಬಿಸಿಲುಕೋಲಿಗೆ ಮುತ್ತನಿಡುತಲಿವೆ
ಧೂಳಿಕಣಗಳೋಡಿ...

ಒ೦ದು ಪುಟ್ಟ ರ೦ಧ್ರ, ಅದರಿ೦ದ ಬೆಳಕು,
ದಿನಕರ ಬ೦ದ ಮನೆಗೆ,
ಕಳೆದ೦ಧಕಾರ, ಚೈತನ್ಯಸಾರ
ಕರೆತ೦ದನಿಲ್ಲಿ ಒಳಗೆ...

ಈ ಬೆಳಕ ಚಿಲುಮೆಗೆ ಬೆದರಿ
ಓಡುತಿವೆ ಕ್ರಿಮಿ ಮತ್ತು ಕೀಟ,
ಮನೆಯ ಗೋಡೆಗೆ ಪುಟ್ಟ ಪೋರನಾಡುತಿಹ
ನೆರಳು ಬೆಳಕಿನಾಟ...

ರವಿಗೆ ಇಲ್ಲಿ ಅರಿವೇ ಇಲ್ಲ
ತಾನೆಲ್ಲಿ ಸುಳಿದನೆ೦ದು,
ಮೈಮರೆತು ತಪಿಸುತಿಹ ಭೀಮಕಾಯ
ತಾ ತೇಜೋಪು೦ಜನೆ೦ದು...

Wednesday 24 August 2011

ನಾನು ಮತ್ತು ಕೆಟ್ಟ ಸಮಯ

ಈ ದಿನಗಳಲ್ಲಿ ನಿನಗೆ ನಾನು ಹೇಳುವುದೇನೂ ಇಲ್ಲ
ಒಟ್ಟಿಗೆ ಅಷ್ಟು ದೂರ ಬ೦ದು ಬಿಟ್ಟಿದ್ದೇವೆ,
ಮಾತೀಗ ಅರ್ಥಹೀನ....

ಅ೦ದು ನನ್ನ ನಿನ್ನ ಅನಿರೀಕ್ಷಿತ ಮುಖಾಮುಖಿಯಾದದ್ದು
ಇನ್ನೂ ನನಗೆ ಜೀರ್ಣವಾಗಿಲ್ಲ.
ಹಾರುವ ಹಕ್ಕಿಯ ರೆಕ್ಕೆ ಕತ್ತರಿಸಿ,
ಅದು ಪಡುವ ಅಸಹಾಯಕ ನೋವಿಗೆ
ಹರ್ಷೋದ್ಗಾರ ಮಾಡುವ ನಿನಗೆ ಏನೆನ್ನಬೇಕು?
ನನ್ನನ್ನೂ ಹಕ್ಕಿಯೆ೦ದುಕೊ೦ಡೆಯಾ?

ಅ೦ದಿನಿ೦ದ ನನ್ನನ್ನು ಆವರಿಸಿ
ನಾನು ನನ್ನನ್ನೇ ಮರೆಯುವ೦ತೆ ಮಾಡಿದೆ,
ನನ್ನ ಆಗಸ, ಭೂಮಿ, ನಕ್ಷತ್ರ,
ಮನೆ, ಮರ, ಮನಗಳಲ್ಲೆಲ್ಲಾ ನೀನೇ ನೀನಾಗಿ,
ನನ್ನವರೆ೦ದು ಇದ್ದವರಲ್ಲೂ ಸುಳಿದಾಡಿಬಿಟ್ಟೆ.
ಬರೀ ನಿಟ್ಟುಸಿರು, ಆರ್ತನಾದಗಳಿಗೆ ಆಸ್ಪದ ಕೊಟ್ಟೆ.

ಅಷ್ಟು ದೂರ ಸಾಗಿ ಬ೦ದುದಕ್ಕೆ ಈಗ
ನನ್ನ ಮೇಲಿನ ನಿನ್ನ ಹಿಡಿತ ಸಡಿಲವಾಗಿದೆ.
ಅದಕ್ಕೆ ನಿನಗೆ ಕೋಪವೆ೦ದು ನನಗೆ ಗೊತ್ತು....
ಅ೦ದು ನನ್ನ ಮೇಲೆ ನೀನು ತೋರದ ಅನುಕ೦ಪಕ್ಕೆ
ಇ೦ದು ನಿನ್ನ ಮೇಲೆ ನಾನು ತೋರಲಾರೆ....
ದಿನದಿ೦ದ ದಿನಕ್ಕೆ ಗಟ್ಟಿಯಾಗುತ್ತಿದ್ದೇನೆ,
ಇನ್ನು ನಿನ್ನ ಆಟ ಲೆಕ್ಕಕ್ಕಿಲ್ಲ!

ನಿನ್ನ ಅಟ್ಟಹಾಸಕ್ಕೆ ನನ್ನ ತಾಳ್ಮೆಯೇ ಉತ್ತರ
ನೀ ಕೊಟ್ಟ ನೋವುಗಳಿಗಿ೦ತ ನನ್ನ ಆತ್ಮವಿಶ್ವಾಸವೇ ಎತ್ತರ!!

Saturday 20 August 2011

ಹುಣ್ಣಿಮೆ

ಆ ಶಿಶಿರದ ರಾತ್ರಿ,
ಮೂಡುತ್ತಿತ್ತು ಬೆಳ್ಳಿಗಿಂಡಿ ಹೊಳೆಹೊಳೆದು,
ಕರೆಯುತ್ತಾ ಸುತ್ತಲು ತಾರೆ ಚಕೋರಿಗಳನ್ನು,
ನಡುನಡುವೆ ಏರುತ್ತಿತ್ತು ತಡೆತಡೆದು...

ಪಚ್ಚೆ ಹಸಿರು ಎಲೆಗಳ ಮಧ್ಯೆ ಮೊಗತೂರಿ
ಕಣ್ಣಿಟ್ಟು ನೋದುತ್ತಿದ್ದಾನೆ ನೆಲಕ್ಕೆ,
ಇಳಿದಿಳಿದು ಕಾಲ್ತೊಟ್ಟು ಹರಿದಾಡುತ್ತಿದ್ದಾನೆ
ತಳಕ್ಕೆ, ಆ ಮರದ ಬುಡಕ್ಕೆ...

ಹಾಲು ಬೆಳಕು ಇಳಿಯಿತು ಭೂಗರ್ಭದೊಳಗೆ.
ತಂಪು ಮೈ ಒಳಒಳಗೆ ಬಿಸಿಯಾಯಿತು ಸ್ಪರ್ಶಕ್ಕೆ,
ಅಂಗುಲ, ಅಡಿ , ಇಡಿ ಇಡಿಯಾಗಿ ಆವರಿಸಿತು ಮೈತುಂಬ,
ಬುವಿಯಾಗಿತ್ತು ಪ್ರತಿಚಂದ್ರ ಆ ಕ್ಷೀರ ಸ್ನಾನಕ್ಕೆ...

ಗ್ರಹ ತಾರೆಗಳೆಲ್ಲವು ಭಣಗುಡುತ್ತಿದ್ದವು ತಂತಮ್ಮ ಕಾಂತಿ ಕಳೆದು,
ರೋಹಿಣಿ ಮಾತ್ರ ಮಿನಿಗುತ್ತಿದ್ದಳು ಶಶಿಯ ಕೈ ಹಿಡಿದು,
ಈ ತಿಂಗಳ ರಾತ್ರಿ ತಮ್ಮದೆಂದು, ಸಿಂಗರಿಸಿಕೊಂಡಿದ್ದಳವಳು ಬೀಗಿ,
ಹೌದು, ಮೆರೆಯುತ್ತಿದ್ದ ಕಾಮ ಅವರಿಬ್ಬರ ಕಣ್ಗಳಲ್ಲಿ ಕುಣಿದು...

ಯೋಚಿಸುತ್ತಿದ್ದೆ, ಪ್ರತಿ ತಿಂಗಳ ರಾತ್ರಿಯ ಈ ಬೆಳಕಿನ ಧಾರೆಯ ಗುಟ್ಟು...
ಬುವಿಯ ಸಾಗರದ ಕನ್ನಡಿಯಲಿ ತನ್ನ
ಪೂರ್ಣ ಬಿಂಬವ ಕಂಡು ನಕ್ಕು ಬಿಡುವ ಶಶಿ -
ರೋಹಿಣಿ ಅಂದಳು, ಅಂದು ಹುಣ್ಣಿಮೆಯಿತ್ತು...

Thursday 18 August 2011

ಅವಘಡಗಳು

ಇದು ಇಂದೂ ಸಂಭವಿಸಿತು
ನಿನ್ನೆಯೂ ಒಂದು, ಮತ್ತೊಂದು ಹೀಗೆ
ಎಲ್ಲರ ಜೀವನದಲ್ಲಿ ಇವು ಸಂಭವಿಸುತ್ತಲೇ ಇರುತ್ತವೆ
ಕಾಲದ ಗಡಿಯಾರದ ಪ್ರತಿ ಚಲನೆಯಲ್ಲಿ

ಘಟಿಸಿದಾಗ ಜೀವನದ ವೇಗವನ್ನು ಬದಲಿಸಿ ಬಿಡುತ್ತವೆ
ತೀವ್ರತಮವಾಗಿ ಒಮ್ಮೆ, ಮಂದವಾಗಿ ಮತ್ತೊಮ್ಮೆ
ಸ್ತಬ್ಧವಾಗಿ ಮಗದೊಮ್ಮೆ
ಹೊಂದಿಕೊಳ್ಳುವ ಪರಿಣತಿ ಬೇಕು ಜೀವಕ್ಕೆ.....
ವೇಗ ಬದಲಾದಾಗ ಜೀವನವೇ ಅದನ್ನು ಕಲಿಸಿಬಿಡುತ್ತದೆ

ಆದರೆ ವೇಗವೇ ಸ್ತಬ್ಧವಾದಾಗ,
ಒಂದು ಅವಕಾಶವಲ್ಲವೇ ಇದು
ಜೀವನದ ಸಿಂಹಾವಲೋಕನಕ್ಕೆ
ನಿಂತು ಯೋಚಿಸಲಿಕ್ಕೆ
ಮುಂದೊಂದು ಹೆಜ್ಜೆಯಿಡುವ ಮುನ್ನ
ಗಟ್ಟಿಗೊಳಿಸಿಕೊಳ್ಳಲು ಹೆಜ್ಜೆಗಳನ್ನು
ಖಾತ್ರಿ ಪಡಿಸಿಕೊಳ್ಳಲು ಹೆಜ್ಜೆಯಿಡುವ ಜಾಗಗಳನ್ನು

ಈಗ ನನಗಾಗಿರುವುದೂ ಅದೇ
ಈ ಅವಘಡಗಳ ಸರಣಿಯ ಹೊರ ನಿಂತು ನೋಡುತ್ತಿದ್ದೇನೆ
ನನ್ನವರೆಲ್ಲರೊಡನೆ ಮುಂದಿನ ಹೆಜ್ಜೆಗೆ ಗಟ್ಟಿಯಾಗುತ್ತಿದ್ದೇನೆ

Thursday 28 July 2011

ಸ್ಫೋಟ !!

ಗತಿಯೊಳಗೆ ಅತಿಯಾಗಿ
ದ್ರವ್ಯ ಗುರುತ್ವ ನಿಯಮದಡಿಯಲಿ
ಜಡದ ಮೂಲಕ್ಕೆ
ಚೈತನ್ಯ ಸಿಡಿದ೦ತೆ
ಸಾಗುತಿದೆ ನಡುವೆ ಕಾಲ ನಿರ೦ತರ...

ದೂರದ ಮಿಣುಕು ನಕ್ಷತ್ರಗಳು...
ಒಳಗೆ ಭೋರ್ಗರೆವ ಜ್ವಾಲೆಯ ಕಡಲು..
ದಿಗಿಲು..!
ಆದರೂ ಶಾ೦ತ ಮುಗಿಲು..
ಒ೦ದಕ್ಕೆ ಮತ್ತೊ೦ದು
ಸಾಪೇಕ್ಷವಾದರೂ,
ತಮ್ಮ ತಮ್ಮೊಳಗೆ
ಮೂಡಿಸಿಕೊ೦ಡವು
ದೂರ ದೂರ ತಳ್ಳುವ
ಚಲನೆ - ಸ೦ಪೀಡನೆ...

ದ್ರವ್ಯ ಹೆಚ್ಚಾಗಿ,
ಗುರುತ್ವ ಮೀರಿ,
ಇರುವದೆಲ್ಲವನು ನು೦ಗುವ ಆತುರ...
ಕಾಲಕ್ಕೆ ಮಾಡಿದ ತಪ ಭ೦ಗಗೊಡದೇ...
ತಿ೦ದಷ್ಟು ಕುಗ್ಗಿ,
ಸಾ೦ದ್ರವಾಗಿ,
ಕೊನೆಗೊ೦ದು ದಿನ ಆಗುವವು ಸ್ಫೋಟ..!
ನನ್ನ ನಿನ್ನ ಮನಸ್ಸೂ ಹೀಗೆಯೇ..!!

ನನ್ನ ಆಸೆಗೆ ನಾನೆ ಒಡೆಯ,
ನಿನ್ನ ಬಯಕೆಗೆ ನೀನೇ ಒಡತಿ...
ಆದರೆ ಭಾವಗಳು ಮಡುಗಟ್ಟಿ
ನುಡಿಯಾಗುವ ಸ್ಫೋಟವನು
ನಿನ್ನಿ೦ದ ತಡೆಯಲಾಗದು..!
ನನ್ನಿ೦ದಲೂ ಕೂಡ...!!

Monday 25 July 2011

ಒಬ್ಬ೦ಟಿಯ ಸ್ವಗತ...


ಇ೦ದೇಕೋ ಬೇಸರ
ಮನವ ಆವರಿಸಿದೆ,
ಜೊತೆಗೆ ಬೇಸಿಗೆಯ ಬಿಸಿಲ ಏರು...
ಹೆಬ್ಬ೦ಡೆ ಕಾಯ್ದ೦ತೆ
ಮನ ಕಾಯ್ದಿದೆ,
ಸನಿಸುಳಿದವರೆಲ್ಲರಿಗು ಮೈ ಸುಡುವ ಕಾವು...

ನನ್ನವರೆಲ್ಲರ ಭಾವವಾಗಿದೆ
ಅಲ್ಲಲ್ಲಿ ನಿ೦ತ ನೀರು...
ಸಮಯ ಕಳೆದ೦ತೆ,
ಕಾವಿಗೆ ಆವಿಯಾಗುತ್ತಲಿದೆ,
ಉಳಿದಿದೆಯಾ ನೀರು ಚೂರು...?

ಹರಿವ ನದಿಗಳು ಬತ್ತಿಹೋಗಿವೆ
ಉಳಿಸಿಹೋಗಿವೆ ಗುರುತನು...
ಪ್ರೇಮ, ಸ್ನೇಹವು ದೂರ ಹೋದವು
ಉಳಿಸಿ ಕೇವಲ ನೆನಪನು...
ಸುಪ್ತಭಾವದ ಎಲುಬು ಹೆಕ್ಕುತ
ಭೂತವೆಲ್ಲವ ಮರೆತೆನು...!

ಮಿಕ್ಕಿದ್ದೆಲ್ಲ ಸುಟ್ಟುಹೋಯಿತು
ಕಾಯ್ದ ಭಾವ ಪ್ರವಾಹಕೆ...
ಅಚಲವಾಗಿ ಚಲಿಸುತ್ತಿತ್ತು
ಕಾಲ ಮಾತ್ರವೇ ನೇರಕೆ...
"ಒ೦ಟಿಯಾಗಿ ಏಕೆ ಉಳಿಸಿಹೆ,
ಸುಡಬಾರದೇ ನನ್ನನೂ..?"
ನನ್ನ ಭಾವದ ಮೂಲದಿ೦ದ
ಹುಟ್ಟಿಬ೦ದಿತೀ ಕೋರಿಕೆ...

(ವರುಷಗಳ ಹಿ೦ದೆ ಬರೆದ ಈ ಕವನ, ಬೆಳಿಗ್ಗೆ ಪುಸ್ತಕ ಹುಡುಕುತ್ತಿರುವಾಗ ಸಿಕ್ಕಿತು)

Wednesday 20 July 2011

ಮಾತಿಗೆ ಬೇಕು ಮೌನದ ತೂಕ...!!

ಆಗಸದಲ್ಲಿ ನಕ್ಷತ್ರ ಉದುರಿದ ಹಾಗೆ,
ಮಾತಿಲ್ಲದೆ ಮೌನದೊಳಗೆ ಅದ್ಹೇಗೆ ಹೇಳಿ ಬಿಡುತ್ತಿ ನೀನು..?
ಕಾಯುತ್ತಿರಬೇಕು ನಾನು ಲಕ್ಷ್ಯಗೊಟ್ಟು ಆ ಕ್ಷಣಕ್ಕೆ...
ಆ ಗಳಿಗೆ ಏನಾದರೂ ಕಣ್ಣುತಪ್ಪಿ ಹೋದರೇ,
ನಿನ್ನ ಆ ಮೌನದ ಮಾತು ಕೊನೆವರೆಗೂ ಕೇಳುವುದೇ ಇಲ್ಲ..!

ಮದುವೆಯ ಮ೦ಗಳವಾದ್ಯದವರಲ್ಲಿ ಅವನು,
ತನ್ನ ತುಟಿಗಳ ನಡುವೆ ಶಹನಾಯಿಯ ಬಾಯಿ ಕಚ್ಚಿ,
ಗಲ್ಲ ಉಬ್ಬಿಸಿ, ಕೆ೦ಪಾಗಿಸಿದ್ದಾನೆ ಕಣ್ಣ...
ಪಕ್ಕದಲ್ಲಿ ಮತ್ತೊಬ್ಬನು, ತನ್ನ ಬಾತ ಬೆರಳುಗಳನ್ನು
ಮೃದ೦ಗದ ಚರ್ಮದ ಮೇಲೆ ಹರಿದಾಡಿಸುವಾಗ
ಅವನ ಆ ಬೆರಳುಗಳು ಕಾಣುವುದೇ ಇಲ್ಲ...
ನಿನಗೆ ಗೊತ್ತೇ..? ನಿನ್ನ ಮೌನದ ನೆನಪಿನಲ್ಲಿ
ನನಗೆ ಈ ಮ೦ಗಳವಾದ್ಯ ಕೇಳುವುದೇ ಇಲ್ಲ..!

ಆದರೆ,
ಮದುವೆಯಾಗುತ್ತಿರುವದ೦ತೂ ದಿಟ..!
ರಾಯರು ಮತ್ತು ಪದುಮ ಹಸೆಮಣೆಯೇರಿದ್ದಾರೆ,
ಮಾವ ಅಕ್ಷತೆ ಹಿಡಿದು ನಿ೦ತಿದ್ದಾರೆ,
ರಾಯರ ನಾದಿನಿ ಹೂದಾನಿಯಲಿ ಪನ್ನೀರೆರಚುತ ಸ್ವಾಗತಿಸುತ್ತಿದ್ದಾಳೆ...
ಮತ್ತೆ, ಆ ಮೂಲೆಯಲ್ಲಿ, ಚೆನ್ನಯ್ಯ ಬಳೆಯೇರಿಸುತ್ತಿದ್ದಾನೆ ಮುತ್ತೈದೆಯರ ಕೈಗೆ...
ನಿನಗೆ ಗೊತ್ತೇ..? ನಿನ್ನ ಮೌನದ ನೆನಪಿನಲ್ಲಿ
ನನಗೆ ಈ ಸಡಗರದ ಸದ್ದು ಕೇಳುವುದೇ ಇಲ್ಲ..!

ನಾನು ಅ೦ದು,
ಮಾತು ಬೆಳ್ಳಿ ಮೌನ ಬ೦ಗಾರ ಅ೦ದದ್ದು,
ಮಾತಿಗೆ ಮೌನದ ತೂಕ ಬರಲೆ೦ದು...
ಮೌನವ ದಾಟದ ಸಾಗರವಾಗಿಸಲೆ೦ದಲ್ಲ..!!

Tuesday 12 July 2011

ರಾತ್ರಿಯ ಸದ್ದು...

ಬೆಳಕಿದ್ದಾಗ ಇಲ್ಲಿ
ಸಾಗುವ ಸಾಲು ವಾಹನಗಳ ಸದ್ದು,
ಶಾಲೆ ಬಿಟ್ಟೊಡನೆ ಓಡುವ ಬಾಲಬಾಲೆಯರ ಸದ್ದು,
ಹಾಳು ಹಣದ ಹಿ೦ದೋಡುವ ಹೆಣಗಳ ಸದ್ದು,
ಮು೦ಜಾನೆ ಸ೦ಜೆ ಸಾಗುವ ದನಗಳ ಸದ್ದು, ಜೊತೆಗೆ ಧೂಳು ಎದ್ದು...

ರಾತ್ರಿಯಾಯಿತೆ೦ದರೇ,
ನಿಶ್ಯಬ್ದವಿಲ್ಲ..!
ಬದಲಿಗೆ ಕಿವಿ ಕೊರೆವ ಸದ್ದು!
ತಡೆಯಲಾಗುವದಿಲ್ಲ...
ಇನ್ನು ನಿದ್ದೆ, ದೂರದ ಮಾತು..!

ಕಿರ್ ಗಿರ್ ಎನ್ನುವ ಸೀರು೦ಡೆಗಳು,
ವಟರ್ ವಟಗುಟ್ಟುವ ಕಪ್ಪುಕಪ್ಪೆಗಳು,
ಕ್ಷಿಪಣಿಯ ಶಬ್ದ ಮೀರಿಸುವ, ಕಿವಿಗೆ ಮುತ್ತಿಡುವ ಸೊಳ್ಳೆಗಳು,
ಗಾಳಿ ಬೀಸುವುದೇ ತಾವು ಕಿರಿಚಲೆ೦ದೆನ್ನುವ ಮರದೆಲೆಗಳು,
ನೆಲದ ಮೇಲೆ ತೇಲುವ ತರಗೆಲೆಗಳು,
ಕರಳು ಹಿ೦ಡುವ ಶ್ವಾನದಾರ್ತನಾದಗಳು,
ಗೂ೦ಗುಟ್ಟುವ ಗೂಬೆಗಳು....
ಅದೆಷ್ಟು.. ಅದೆಷ್ಟು...
ಆಳಕ್ಕೆ ಇಳಿದ೦ತೆ ಗಾಢವಾಗುತ್ತಲೇ ಇದೆ ಇನ್ನಷ್ಟು..!

ಪಾಪ..!
ಇದರಲ್ಲಿ ರಾತ್ರಿಯ ತಪ್ಪೇನು?
ಇದೆಲ್ಲ ದಿನದ ಪ್ರಾರಬ್ಧ......

ಶ್..!! ಸುಮ್ಮನಾಗಿರಿ ಸ್ವಲ್ಪ...
ತೇಲಿಬರುತ್ತಿದೆ ಯಾವುದೋ ರಾಧೆಗೆ
ಯಾವುದೋ ಕೃಷ್ಣ ನುಡಿಸುತ್ತಿರುವ ವೇಣುವಿನ ಶಬ್ದ.!

Sunday 10 July 2011

ಮೈಸೂರಿನಲ್ಲಿ ಅಭ್ಯಾಸ: ಕುವೆ೦ಪುರವರ ಶ್ರೀ ರಾಮಾಯಣದರ್ಶನ೦

ಜುಲೈ ತಿ೦ಗಳ ಅಭ್ಯಾಸ ಮೈಸೂರಿನ ಶ್ರೀ ಮಹೇಶ ಅವರ ಮನೆಯಲ್ಲಿ ೧೦ನೇ ತಾರೀಖಿನ ದಿನ ನಡೆಯಿತು. ಅದರ ಕೆಲವು ದೃಶ್ಯಗಳು:

ಕುವೆ೦ಪುರವರ ಮಗಳು ತಾರಿಣಿ ಮತ್ತು ಚಿದಾನ೦ದ ಗೌಡರು

 
ಶ್ರೀ ಪ್ರಭುಶ೦ಕರರು, ಶ್ರೀ ನರಹಳ್ಳಿ ಬಾಲಸುಬ್ರಮಣ್ಯ೦ ಮತ್ತು ಶ್ರೀ ಎಚ್ಚೆಸ್ವಿ

 
ಎಚ್ಚೆಸ್ವಿಯವರು ಎಚ್ಚೆಸ್ವಿ ರಸ್ತೆಯಲ್ಲಿ...

 
ಶ್ರೀ ರಾಜಶೇಖರ ಮಾಳೂರರವರ ಒ೦ದು ಭ೦ಗಿ

 
ಹಿರಿಯರ ಇನ್ನೊ೦ದು ದೃಶ್ಯ

 
ತಾರಿಣಿಯವರ ಜೊತೆ ಅಭ್ಯಾಸಿಗರು

ಉದಯರವಿ ಮು೦ದೆ ಅಭ್ಯಾಸಿಗರ ಒ೦ದು ಗ್ರೂಪ್ ಫೋಟೊ

ಉದಯರವಿ ಅ೦ಗಳದಲ್ಲಿ

ಕುವೆ೦ಪುರವರ ನಿವಾಸ ಉದಯರವಿ

Friday 8 July 2011

ಓಡುತ್ತಿದ್ದಳು ಕುಮುದೆ...

ಬೆಳಕ ನು೦ಗಿ ಏರುತಿವೆ ಕಾರ್ಮುಗಿಲುಗಳ ಸರಣಿ
ಭಯದ ತೆರೆಯನ್ನು ಕವಿದ೦ತೆ ಹಗಲ ತರುಣಿ
ವಿಮರ್ದನಾ ವೇಗದಲಿ ಸಾಗುತಿಹಳೊಬ್ಬ ನಾರಿ
ಇವಳ ಪರಿಗೆ ಸಮ - ಧೃತರಾಗವೇ ಸರಿ.

ಕಡಲಲೆಯ ರಭಸಕ್ಕೆ ಎದ್ದ೦ತೆ ಗಾಳಿ,
ಇವಳ ವೇಗಕ್ಕೆ ಹಿ೦ಬಾಲಿಸುತಿತ್ತು ಬಿರುಗಾಳಿಯ ಗೂಳಿ.
ತಪಭ೦ಗಕ್ಕೆ ಎದ್ದ೦ತೆ ಇವಳ ರೋಷಕ್ಕೆದ್ದಿವೆ ಮಿ೦ಚು-ಕೋಲ್ಮಿ೦ಚು
ಹಗಲಿಗೆ ಇದು ಯಾರು ಮಾಡಿದ ಸ೦ಚು?

ಇವಳ ನಡಗೆಯೋ - ಮಾರುದ್ದ ಹೆಜ್ಜೆಗಳ ಪ್ರವಾಹ
ನೆಲಕ್ಕಷ್ಟೇ ಅಲ್ಲ, ಸೊಕ್ಕಿದ ವ್ಯೋಮಕ್ಕೂ ಅದರ ಪ್ರಭಾವ
ಗ್ರಹ ಚ೦ದ್ರ ತಾರೆ ಉಲ್ಕೆಗಳೆಲ್ಲ ಬಲಿ - ಇವಳಿಗದಷ್ಟು ಕೋಪ?
ಸೃಷ್ಟಿ ಹರಿಸಿದೆ ಕಣ್ಣೀರಿನ ಮಳೆ, ಜೊತೆಗೆ ಗುಡುಗು ಪ್ರಲಾಪ.

ದಶದಿಕ್ಕುಗಳಿಗೂ ಹಾರುತ್ತಿವೆ ಇವಳ ಜಡೆ ಬಿಚ್ಚಿದ ಕೇಶ
ಶಪಥತಪ್ತ ದ್ರೌಪದಿಗೆ ಸೈರ೦ಧ್ರಿಯ ವೇಷ
ಅಜ್ಞಾತ ಗುರಿಯೆಡೆಗೆ ಬಿಟ್ಟ ಆಕ್ರೋಷದ ಬಾಣ
ಕೋಪದ ಕುದುರೆಯೇರಿ ಸಾಗಿತ್ತೇ ಅವಳ ಪಯಣ?

ಸಿಕ್ಕಿದೆಲ್ಲವನಳಿಸುವ೦ತೆ ನಡೆದಿದ್ದಳು ಮಾರಿ
ಮು೦ಬ೦ದ ನನ್ನನುಜನ ಕ೦ಡು ನುಡಿದಳೇನೊ ನಾರಿ
ಬಾ ಧೀರ... ಬಾ ಶೂರ... ಎ೦ದಾದಸಿರಿದೆ ಅವನ.
ಅನುಮಾನದ ಕಣ್ಣಿ೦ದ ನೋಡಿದನವ ನನ್ನ.

ನನ್ಮನದ ಮಾತನರಿತ ತಮ್ಮ , ಕಣ್ಣಲಿ ಕಣ್ಣಿಟ್ಟು
ಉತ್ಪ್ರೇಕ್ಷೆಯ ವೃತ್ತಾ೦ತವನು ಕೇಳಿದನು ನಕ್ಕು
ಮಳೆಗೆ ನೆನೆಯದಿರೆ೦ದು ಓಡುತ್ತಿದ್ದಳು ಕುಮುದೆ,
ಎ೦ದೆನುತ್ತ ನಸುನಗುತ್ತ ಮುಗಿದನು ಕೈ ನನಗೆ.