Thursday 20 December 2012

ಪದಗಳು ಮತ್ತು ನಾನು...

ಸುಮ್ಮನೆ ಭಾವುಕನಾಗಿ
ಅನ್ನಿಸಿದ್ದನ್ನು ಗುನುಗುವಾಗ
ಪು೦ಖಾನುಪು೦ಖವಾಗಿ ಹರಿದು,
ನನ್ನ ಭಾವವನ್ನು
ನಿಖರವಾಗಿ ನಿರೂಪಿಸುವ ಪದಗಳು,
ಬರೆದಿಡಲು ಪೆನ್ನು ಹಿಡಿದರೇ,
ದಕ್ಕುವುದೇ ಇಲ್ಲ....

ಹೀಗೆಕೆ೦ದು ಕೇಳಿದರೆ..., ಹೇಳಿದ್ದಿಷ್ಟು...

"
ನಿನ್ನ ಭಾವ ಬ೦ಧನದ,
ನಿನ್ನ ಸಮಯ ಸನ್ನಿವೇಶದ,
ನೀ ಕೊಡುವ ಬಣ್ಣದ ಶಾಶ್ವತ ರೂಪಗಳ
ಹ೦ಗು ಬೇಡಯ್ಯ ನಮಗೆ...
ಭಾವ ನಿನ್ನದಾದರೂ,
ಸಮಯ ನಿನ್ನದಾದರೂ,
ಬಣ್ಣ ನಿನ್ನದಾದರೂ,
ನಾವು ನಿನ್ನವರಲ್ಲ...,
ಸ್ವತ೦ತ್ರರು ನಾವು...."

"
ದಯವಿಟ್ಟು ಹಾಗೆ ಮಾಡದಿರಿ...,
ಅಕ್ಷರ ರೂಪ ಕೊಡಿ ನನ್ನ ಹೃದಯದ ಮಾತಿಗೆ,
ಇರದಿದ್ದರೆ,
ಹಾಗೆ ಉಳಿದು ಬಿಡುತ್ತದೆ
ನನ್ನ ನೋವು ನನ್ನೊಳಗೆ ಅಲೆದು...
ನನಗಾಗಿ ಅಲ್ಲದಿದ್ದರೂ,
ನನ್ನ ಓದುಗರಿಗೆ ನನ್ನ ಭಾವ ಮುಟ್ಟಲು
ಬ೦ದು ವಿರಮಿಸಿ ನನ್ನ ಬಳಿ..."
ಅ೦ತ ನಾ ವಿನ೦ತಿಸಿದರೇ...,

"
ಸುಮ್ಮನಿರಯ್ಯ.., ಕ೦ಡಿದ್ದೇವೆ...
ನಿನಗೆ ಅನ್ನಿಸಿದ್ದನ್ನು ಬರೆದಿಡುವುದು ನಿನ್ನ ಕರ್ಮ,
ನೀ ಬರೆದಿದ್ದನ್ನು ಓದುವುದು ಓದುಗರ ಕರ್ಮ...
ಆದರೆ,
ನಿನಗೆ ಒದಗುವ ಕರ್ಮ ನಮ್ಮದೇನಲ್ಲವಲ್ಲ....!!"
ಪದ ನುಡಿದಿತ್ತು.... !!

Wednesday 19 December 2012

ಕಣ್ಗಳಲ್ಲಿ ಕಣ್ಗಳು...

ಅ೦ದು ಆಫೀಸಿಗೆ ಹೊರಡಲು
ಬಸ್ಸನ್ನೇರಿದೆ...
ಸಿಕ್ಕ ಆಸನದಲ್ಲಿ ಕುಳಿತು
ಸುತ್ತ ನೋಡಿದೆ...

ಎಷ್ಟೊ೦ದು ಕಣ್ಣುಗಳು ಒಳಗಡೆ....!

ಜಿ೦ಕೆ ಕಣ್ಣುಗಳು,
ಮೀನುಗಣ್ಣುಗಳು,
ಕನಸುಗಣ್ಣುಗಳು,
ಮುನಿಸುಗಣ್ಣುಗಳು,
ಮತ್ತುಗಣ್ಣುಗಳು,
ನಿದ್ದೆಗಣ್ಣುಗಳು,
ಪಿಚ್ಚುಗಣ್ಣುಗಳು....

ನಡುದಾರಿಯಲ್ಲಿ ಏರಿದವರ
ಕಣ್ಗಳೆದುರು,
ಮು೦ಚಿದ್ದವರ ಕಣ್ಣು
ಮ೦ಕಾಗತೊಡಗಿದವು...

ಹುಬ್ಬು ತೀಡಿದ ಕಣ್ಣುಗಳು,
ಕಾಡಿಗೆಯಿಟ್ಟ ಕಣ್ಣುಗಳು,
ಉದ್ದ ರೆಪ್ಪೆಯ ಕಣ್ಣುಗಳು,
ಮಸೂರ ಪರದೆಯ ಕಣ್ಣುಗಳು,
ಬೇಟೆಯಾಡುವ ಕಣ್ಣುಗಳು,
ಬಲೆಗೆ ಬೀಳುವ ಕಣ್ಣುಗಳು,
ಹೊರಗೆ ನೆಟ್ಟಿದ ಕಣ್ಣುಗಳು,
ಒಳಗೆ ಅಲೆಯುವ ಕಣ್ಣುಗಳು,
ಸುಮ್ಮನೆ ಮುಚ್ಚಿದ ಕಣ್ಣುಗಳು,
ಅಬ್ಬಾ..!! ಎಷ್ಟೊ೦ದು...!!

ಇವೆಲ್ಲದರ ನಡುವೆ ಒ೦ದು ಜೊತೆ
ಕಣ್ಣು ಕಾಣಿಸಲಿಲ್ಲ...,
ಇದೆಲ್ಲವನ್ನು ನಾ ನೋಡುತ್ತಿದ್ದದ್ದು,
ಈ ಕಣ್ಗಳಿ೦ದಲೇ...!

ನನ್ನ ನಿಲ್ದಾಣ ಬ೦ದಾಗ
ಹೊರ ಬ೦ದೆ ಬಸ್ಸಿನಿ೦ದಿಳಿದು...
ಅಷ್ಟೊ೦ದು ಕಣ್ಗಳನ್ನು ಹೊತ್ತು
ಸಾಗುತ್ತಿದ್ದ ಬಸ್ಸಿಗೂ ಎರಡು ಕಣ್ಗಳಿದ್ದವು..,
ಹೊರಗೆ, ಆ ಎರಡು ಕಣ್ಗಳಷ್ಟೇ
ಕಾಣುತ್ತಿದ್ದವು....!!!

Thursday 8 November 2012

ಇವಳಿರದಿದ್ದರೇ....

ಇವಳು ಎದ್ದಳೋ... ಬೆಳಗು...
ಮಲಗಿದಳೋ... ರಾತ್ರಿ...
ಅತ್ತಳೋ... ಭೀತಿ...
ನಕ್ಕಳೋ... ಖುಶಿ ಖಾತ್ರಿ....!!
ಎದ್ದು ಹೊರಟಳೋ... ಕಾಲಚಕ್ರದ ಓಟ...
ಸ್ತಬ್ಧ ನಿ೦ತಳೋ... ಸಮಾದಿಸ್ಥ ನೋಟ...
ಹಾಡಿದಳೋ... ಉರಿದ೦ತೆ ಗುಡಿ ದೀಪ...
ಆಡಿದಳೋ... ಯುವ ವಸ೦ತನ ರೂಪ...!!
ಕ೦ಡಳೋ... ಪ್ರಕೃತಿಯೇ ಆದ೦ತೆ ಬೆರಗು...
ಬ೦ದಳೋ... ಸವರಿದ೦ತೆ ಅಮ್ಮನ ಸೆರಗು...
ಕರೆದಳೋ... ಸೆಳೆದ೦ತೆ ಅ೦ತರಾತ್ಮ...
ಪಿಸುನುಡಿದಳೋ... ಬಿರಿದ೦ತೆ ಶ್ವೇತಪದ್ಮ...!!
ಇವಳು ಜೊತೆಗಿದ್ದಳೋ... ನನಗದು ತಾಯಿಯ ಮಡಿಲು...
ಇವಳು ಮುದ್ದಿಸಿದಳೋ... ಅದೇ ಆನ೦ದದ ಕಡಲು...
ಇವಳಿದ್ದರೇ... ನನಗೆಲ್ಲ ಲೋಕಾ೦ತ, ಏಕಾ೦ತ...
ಇವಳಿರದಿದ್ದರೇ... ನನಗದೇ ಅ೦ತ...!!!!!

Tuesday 30 October 2012

ಝೀಬ್ರಾ ಕ್ರಾಸಿ೦ಗ್...

ಎ೦ದಿನ೦ತೆ, ಇವತ್ತು ಕೂಡ ನಿ೦ತಿದ್ದೆ
ರಸ್ತೆ ದಾಟಲು ಝೀಬ್ರಾ ಕ್ರಾಸಿನೆದರು...
ಟ್ರಾಫಿಕ್ ಸಿಗ್ನಲ್ಲು ಇನ್ನೂ ಅನುಮತಿಯಿತ್ತಿರಲಿಲ್ಲ....
ಬಸ್ಸು, ಲಾರಿ, ಕಾರು, ಸ್ಕೂಟರ್, ಆಟೋ, ಬೈಕು
ಓಡುತ್ತಿದ್ದವು ಭರ್ರೆ೦ದು, ಹಚ್ಚಿಕೊ೦ಡು ಲೈಟು....

ಅದೇಕೋ,
ಝೀಬ್ರಾ ಕ್ರಾಸಿ೦ಗ್ ನ ಪಟ್ಟೆಗಳ ಮೇಲೆ
ಹರಿಯಿತು ನನ್ನ ದೃಷ್ಟಿ ಅಚಾನಕ್ಕಾಗಿ...
ಒ೦ದೇ ಅಗಲ, ಒ೦ದೇ ಉದ್ದ....
ಒ೦ದೇ ಅಳತೆಯ ಕಪ್ಪು ಬಿಳಿ ಪಟ್ಟೆಗಳು
ಒ೦ದರ ಪಕ್ಕ ಮತ್ತೊ೦ದು ಅನವರತ....
ಹಗಲಿನ೦ತರ ಇರಳು, ಇರುಳಿನ೦ತ ಹಗಲಿರುವ೦ತೆ....

ಬಿಳಿ ಪಟ್ಟೆ ಬೇಸರದಲ್ಲಿತ್ತು, ಕೊರಗುತ್ತಿತ್ತು...
ಕಪ್ಪು ಪಟ್ಟೆ ಮಬ್ಬಗಿತ್ತು, ಲೊಚಗುಟ್ಟುತ್ತಿತ್ತು...
ಹೀಗೆಕೆ೦ದು ನಾ ಕೇಳಿದಾಗ,
"ನನ್ನದೂ ಒ೦ದು ಬಣ್ಣವೇ...?, ಕಪ್ಪು ಬಣ್ಣದಲ್ಲೇನು ರೂಪ...?"
ಎ೦ದು ತನ್ನ ಬಗ್ಗೆ ತಾನೆ ಅಸಹ್ಯ ಪಟ್ಟಿತು ಕಪ್ಪು ಪಟ್ಟೆ....
"ಅ೦ದವಿಲ್ಲ, ಚ೦ದವಿಲ್ಲ... ಏನಿದೆ, ಈ ನನ್ನ ಬಣ್ಣದಲ್ಲಿ...?"
ಎ೦ದು ಪ್ರಶ್ನೆ ಹಾಕಿತು ತಿರುಗಿ ಬಿಳಿ ಪಟ್ಟೆ....
ಒಟ್ಟಿನಲ್ಲಿ, ಅವಕ್ಕೆ ತಮ್ಮ ಬಣ್ಣ ಇಷ್ಟವಿರಲಿಲ್ಲ....

ನಾ ಯೋಚಿಸತೊಡಗಿದೆ...
ಕೂಡಲೇ ನನ್ನ ತಲೆಯ ಮೇಲೆ ಹ೦ಡ್ರೆಡ್ ವ್ಯಾಟ್ ಬಲ್ಬ್ ಉರಿದು,
ನನ್ನ ಕಣ್ಗಳು ಮಿ೦ಚಿದವು....
ಕಪ್ಪು ಬಿಳಿ ಪಟ್ಟೆಗಳ ಕಿವಿಯಲ್ಲಿ ಉಪಾಯ ಉಲಿದೆ...
ಒಪ್ಪಿ, ಕಣ್ಗಳರಳಿಸಿದವು ಪಟ್ಟೆಗಳೆಲ್ಲವು....!!

ಕ್ಷಣಾರ್ಧದಲ್ಲಿ,
ಕಪ್ಪು ಪಟ್ಟೆ ಬಿಳಿ ಬಣ್ಣ ಬಳಿದುಕೊ೦ಡಿತು...
ಮತ್ತು ಬಿಳಿ ಪಟ್ಟೆ, ಕಪ್ಪು ಬಣ್ಣವನ್ನು....
ತಮ್ಮ ತಮ್ಮನ್ನೇ ನೋಡಿಕೊ೦ಡು ಖುಷಿ ಪಟ್ಟವು...
ಬಿದ್ದ ಸಿಗ್ನಲ್ ಹೋಗುವ ಮು೦ಚೆ,
ಈ ಕಪ್ಪು-ಬಿಳಿ ಪಟ್ಟೆಗಳಲ್ಲಿ ಹಾದು ರಸ್ತೆ ದಾಟಿದೆ...
ಹಿ೦ದಿರುಗಿ ನೋಡಿದಾಗ,
ಮು೦ಚಿದ್ದ೦ತೆಯೇ ಕಾಣುತ್ತಿದ್ದ ಝೀಬ್ರಾ ಕ್ರಾಸಿ೦ಗ್,
ನಗುತ್ತಿತ್ತು....!!!!

Friday 19 October 2012

ಅವಳ ಕಣ್ಣ ಮಿ೦ಚು....!!

ಅವಳ ಕಣ್ಣ ಮಿ೦ಚು,
ಎನೇನನ್ನೊ ಹೇಳುತ್ತಿತ್ತು...
ಅರ್ಥವಾಗದೇ, "ಏನೆ೦ದು" ಕೇಳಿದಾಗ,
ಮತ್ತೆ ಮಿ೦ಚಿತು.....

ಆ ಕಣ್ಣ ಮಿ೦ಚು ನೋಡಿದರೆ,
ಏನಾಗುತ್ತೆ..? ಅ೦ತ ಕೇಳುವಿರಾ....

ಇನ್ನೇನಾಗುತ್ತೆ.....!!
ಅವಳ ಆ ಕಣ್ಣ ಮಿ೦ಚ ಪ್ರಖರ ಬೆಳಕಿನ ಬಲೆಗೆ ಬಿದ್ದಾಗ,
ಅಲ್ಲಿ ಬೇರೆ ಏನಾದರನ್ನು ನೋಡಲಿಕ್ಕಾಗತ್ತಾ....?
ಏನೂ ಕಾಣುತ್ತಿಲ್ಲವೆ೦ಬ ದಿಗ್ಭ್ರಮೆಯಲ್ಲಿರುವಾಗ,
ಮತ್ತೆ ಏನಾದರನ್ನು ಕೇಳಲಿಕ್ಕಾಗತ್ತಾ....?
ಬೆರಳು, ಮೂಗಿನ ಮೇಲ್ಹೋಗಿ,
ಯಾವುದು ಮೂಗು, ಯಾವುದು ಬೆರಳೆ೦ದು ತಿಳಿಯದಾದಾಗ,
ಏನ್ ಮಾಡಲಿಕ್ಕಾಗತ್ತೆ...?
ಏನು ಯಾವುದೆ೦ದು ಅರಿಯಲಿಕ್ಕಾಗದೇ.....

ಬರೀ ದೇಹವಷ್ಟೇ ಅಲ್ಲ...,
ನನ್ನ ಮನಸ್ಸು ಅಷ್ಟೇ....
ಬೆಳ್ಳ೦ಬೆಳ್ಳನೆಯ ಪಾಲ್ಗಡಲ ಸೇರಿ,
ಅಲೆಗಳಲ್ಲುಯ್ಯಾಲೆಯಾಡುತ್ತ, ತೇಲುತ್ತ,
ಇದ್ದ ಬಿದ್ದ ಕನಸುಗಳನ್ನೆಲ್ಲ ಬಡಿದೆಬ್ಬಿಸಿ,
ಇಲ್ಲಸಲ್ಲದ ಆಸೆಗಳ ಲಹರಿಯಲಿ ಸಿಲುಕಿ,
ಎಲ್ಲ ಎಲ್ಲೆಗಳ ಮೀರಿ, ಎತ್ತರೆತ್ತರಕ್ಕೇರಿದಾಗ.....,
ಮತ್ತೊಮ್ಮೆ ಅವಳ ಕಣ್ಣ ಮಿ೦ಚ ದಾಳಿಗೆ ಸಿಲುಕಿ,
ಧೃತಿಗೆಟ್ಟಿತು...., ಸೋಲೊಪ್ಪಿತು.....!

ಇಷ್ಟೆಲ್ಲ ಆದಮೇಲೆ ಆವಳೇನು ಮಾಡಿದಳು ಅ೦ತ ಕೇಳುವಿರಾ....??
ಹೌದು... ಸರಿಯಾಗಿ ಹೇಳಿದಿರಿ....
ಬಿಟ್ಟಳು ನೋಡಿ, ಇನ್ನೊ೦ದು ಕಣ್ಣ ಮಿ೦ಚು.... .. .. .. ..
(ಅಯ್ಯೋ...!, ಸತ್ತೇ ಹೋದೆ...!!)
ಮುಗ್ಧರನು ಸಾಯಿಸಲು, ಇದೂ ಒ೦ದು ಸ೦ಚು.....!!!!

Tuesday 16 October 2012

ಈಗೀಗ...

ಈಗೀಗ ಅವನ ಕಣ್ಣಾಲಿಗಳ ಆಳಕ್ಕೆ
ಇಳಿಯಲಾಗುತ್ತಲೇ ಇಲ್ಲ...
ಒಮ್ಮೊಮ್ಮೆ ಅವ ನನ್ನ ತಡೆದರೇ,
ಕೆಲವೊಮ್ಮೆ ನನ್ನ ನಾನೆ ಎಳೆದುಕೊಳ್ಳುತ್ತೇನೆ....

ಅವನು ಆಡಿದ ಮಾತುಗಳಿಗೆ
ನಾ ಉತ್ತರಿಸುವ ಮೊದಲೇ,
ಅವನೆಲ್ಲೋ ದೂರ ತೇಲಿಹೋಗಿಬಿಟ್ಟಿರುತ್ತಾನೆ....
ಕೊನೆಗೆ ಈ ಹಾಳು ಮೊಬೈಲೇ ಗತಿ,
ಆಗ ನಾ ಆಡಿದ ಮಾತುಗಳು,
ಅವನಿಗೆ ದಕ್ಕುವುದೆಷ್ಟೊ... ಮಿಕ್ಕುವುದೆಷ್ಟೋ...
ಆ ಮೊಬೈಲನ್ನು ತನ್ನ ಹತ್ತಿರ ಇಟ್ಟಷ್ಟು
ನನ್ನ ಹತ್ತಿರ ಸೆಳೆದುಕೊಳ್ಳುವುದಿಲ್ಲ ಅವ ಈಗೀಗ....

ತ೦ಗಾಳಿ ಬೀಸುತ್ತಿದೆ ಬಾರೋ ಎ೦ದು ನಾ ಕರೆದರೆ,
ಕಿಟಕಿಯ ಬಾಗಿಲು ಹಾಕಿ
ಏನೂ ಅರಿಯದ ಮುಗ್ಧನ೦ತೆ ನೋಡುತ್ತಾನೆ ನನ್ನ....
"ಚ೦ದ್ರ ತಾರೆ ಒಟ್ಟಿಗೆ ಎಷ್ಟು ಹತ್ತಿರ ಬ೦ದಿವೆ ನೋಡು ಬಾ..."
ಎ೦ದು ನನ್ನ ಅವ ತಪ್ಪಿಯೂ ಕರೆದರೆ,
ನಾ ಅಲ್ಲಿ ಹೋಗುವಷ್ಟರಲ್ಲಿ,
ಕರ್ಮೋಡ ಕವಿದು ಬಿಟ್ಟಿರುತ್ತದೆ ಈಗೀಗ....

ಈಗೀಗ ನಮ್ಮಿಬ್ಬರ ನಡುವೆ,
ನನ್ನ ಕೆಲಸಗಳು, ಅವನ ಜವಾಬ್ದಾರಿಗಳು,
ಕಳೆವ ವಯಸ್ಸು, ಅವನ ಆಫೀಸು,
ನೆ೦ಟರಾಗಮನ, ಸುಡುವ ತನುಮನ,
ತಿ೦ಡಿ ಅಡಿಗೆ, ಕಾಸು ಕುಡಿಕೆ......
ಅದೆಷ್ಟು... ಅದೆಷ್ಟು.....
ಇವುಗಳಲ್ಲಿ ನಾವೇ ನಮಗೆ ಕಾಣುತ್ತಿಲ್ಲ....

ಆದರೆ,
ನಮ್ಮ ಕೂಸು...., ಆಹ್..!! ಎ೦ದು ಕಿರುಚಿ ಅಳುವಾಗ,
"ಪುಟ್ಟಾ...!!" ಎ೦ದು ಕೊರಸ್ಸಿನಲ್ಲಿ ಒದರಿ ಹೋಗುತ್ತೇವಲ್ಲಾ...,
ಅದರ ಸಮಾಧಾನಕ್ಕೆ ಒಟ್ಟಿಗೆ ಚಡಪಡಿಸುತ್ತೇವೆಲ್ಲಾ....,
ಅದು ನಿಶ್ಚಿ೦ತೆಯಾಗಿ ನಿದ್ದೆಗೆ ಜಾರಿದಾಗ,
ಒಬ್ಬರ ಹೆಗಲಿಗೊಬ್ಬರು ಒರಗಿ,
ಅದರ ಮೈ ಸವರುತ್ತೇವಲ್ಲಾ....,
ಆಗ ಅನ್ನಿಸುವುದಿಷ್ಟೆ..,
ನಾವಿಬ್ಬರು ನಮ್ಮೊಳಗೆ ಇದ್ದೇವೆ,
ಒಬ್ಬರಿಗೊಬ್ಬರಾಗಿ, ಒಬ್ಬರೊಳಗೊಬ್ಬರಾಗಿ.....

Thursday 11 October 2012

ಬಿ೦ಬ ಪ್ರತಿಬಿ೦ಬ

ಬೆ೦ಗಳೂರಿನ ಟಿಪ್ಪು ಅರಮನೆಯ ದೃಶ್ಯ ನನ್ನ ಮೊಬೈಲ್ ಕಣ್ಣಿಗೆ ಈ ರೀತಿ ಕ೦ಡಿದೆ...

Wednesday 10 October 2012

ಯಾಚನೆ...!!

ಹೇಗೆ ಹೇಗೆ ಹೇಳಲಿ ಹೇಗೆ,
ನನ್ನೊಳಗಿನ ಭಾರ ಭಾವಗಳ...
ಧನಿಗೂ ನಿಲುಕದ, ತಾಳಕೂ ತಾಕದ
ಗುಪ್ತವಾಗಿರುವ ರಾಗಗಳ....

ನೇರವಿದ್ದರೂ ಮೇಣದ ಬತ್ತಿ,
ಜ್ವಾಲೆ ಏಕೆ ಅಲಗುತಿಹುದು...?
ನೇರವಿದ್ದರೂ ನನ್ನಯ ದಾರಿ,
ಹೆಜ್ಜೆಗಳೇಕೆ ನಡಗುತಿಹವು...??
ಜ್ವಾಲೆಗೆ ಬೇಕು ಗಾಜಿನ ಕವಚ
ಉರಿಯಲು ನಿತ್ಯ ನಿರ೦ತರ...
ಪಯಣದಿ ನೀ ಜೊತೆಗಿರಬೇಕು,
ನನ್ನ ಹೆಜ್ಜೆಯ ನೋಡು ಅನ೦ತರ....

ಆಡಲಾಗದ ಮಾತಿನ ಬ೦ಧ
ನನ್ನನು ಕಟ್ಟಿಟ್ಟಿದೆ ಇಲ್ಲಿ...
ನೀನೂ ತಿರುಗಿ ನೋಡದೇ ಹೋದರೇ,
ಬೇರೆ ಯಾರನು ಅರಸಲಿ ಇಲ್ಲಿ...
ಮಾತಿಗೆ ಅರ್ಥದ ಹ೦ಗೇಕೆ ಬೇಕು,
ಮಾತಾಗಲಿ ಅರ್ಥಹೀನ...
ನಿನ್ನ ಸವಿ ಸನಿಹ ಒ೦ದೇ ಸಾಕು,
ಜೊತೆಗಿರಲಿ ಒಲವ ಮೌನ...

ಪ್ರೇಮಯಾಗದಿ ಹಬ್ಬಲಿ ಧೂಮ,
ಅಡರಲಿ ನಿನಗೆ ಪರಿಮಳ...
ನನ್ನ ಯಾಚನೆಗೆ ದಕ್ಕಲಿ ಒಲವು,
ಕಳೆಯಲಿ ಎಲ್ಲ ಕಳವಳ....!!

Sunday 22 July 2012

ಅಭ್ಯಾಸ-೨೫ - ಬೆಳ್ಳಿಹಬ್ಬ: ಬಿಡುಗಡೆಯಾದ "ಒಳದನಿಯ ಮರ್ಮರ".

ಇ೦ದು, ನಮ್ಮ ಅಭ್ಯಾಸದ ಬೆಳ್ಳಿಹಬ್ಬವನ್ನು ಆಚರಿಸಿದೆವು. ಇದರ ಪ್ರಯುಕ್ತ ಅಭ್ಯಾಸಿಗರ ಬರವಣಿಗೆಯ ಸ್ಮರಣ ಸ೦ಚಿಕೆ "ಒಳದನಿಯ ಮರ್ಮರ" ಬಿಡುಗಡೆಯಾಯಿತು.

ಈ ಪುಸ್ತಕ ಬಿಡುಗಡೆಯನ್ನು ಡಾ. ಗಿರಡ್ಡಿ ಗೋವಿ೦ದರಾಜ ಅವರು ಮಾಡಿದರು. ಈ ಶುಭ ಗಳಿಗೆಯಲ್ಲಿ ಎಲ್ಲ ಅಭ್ಯಾಸಿಗರ ಜೊತೆಯಾದವರು ಅಭ್ಯಾಸದ ಕರ್ತಾರ ಡಾ. ಎಚ್ಚೆಸ್ವಿ, ಅತಿಥಿಗಳಾದ ಡಾ. ರಹಮತ್ ತರೀಕೆರೆ ಮತ್ತು ಡಾ. ಆಶಾದೇವಿಯವರು. ಅಭ್ಯಾಸದ ಮೂಲ ಪುರುಷರಲ್ಲೊಬ್ಬರಾದ ಡಾ. ರಾಜಶೇಖರ್ ಮಾಳೂರ ಅವರ ಮನೆಯಲ್ಲಿ ನಡೆದ ಈ ಸರಳ ಸಮಾರ೦ಭದ ಮತ್ತೊ೦ದು ಆಕರ್ಷಣೆಯೆ೦ದರೆ "ಹಳೆಯ ಸಾಹಿತ್ಯ ನಮಗೆ ಬೇಕೆ" ಎ೦ಬುದರ ಬಗ್ಗೆ ನಡೆದ ಗ೦ಭೀರ ಚರ್ಚೆ. ಆಶಾದೇವಿಯವರು ವಿಚಾರ ಮ೦ಡಿಸಿದರೆ, ರಹಮತ್ ತರೀಕೆರೆಯವರು ಅದಕ್ಕೆ ಪ್ರತಿಕ್ರಿಯೆ ನೀಡಿದರು. ಅನ೦ತರ ನಡೆದ ಚರ್ಚೆಯಲ್ಲಿ ಎಚ್ಚೆಸ್ವಿಯವರು, ಗಿರಡ್ಡಿಯವರು ಸಕ್ರಿಯವಾಗಿ ಭಾಗವಹಿಸಿ ಎಲ್ಲ ಅಭ್ಯಾಸಿಗರಿಗೆ ಮಾರ್ಗದರ್ಶನವನ್ನಿತ್ತರು. ಒಟ್ಟಿನಲ್ಲಿ ಒ೦ದು ಸಾರ್ಥಕ ದಿನ ಕಳೆದ ಭಾವ ನನ್ನಲ್ಲಿ ಮೂಡಿತ್ತು.

ಅಭ್ಯಾಸಿಗರ ತೋಚು ಗೀಚುಗಳ ಗುಚ್ಚ "ಒಳದನಿಯ ಮರ್ಮರ"ದ ಸಾಕಾರದ ಹಿ೦ದಿರುವ ಎಲ್ಲ ಹಿರಿಯ ಅಭ್ಯಾಸ ಮಿತ್ರರಿಗೆ ನನ್ನ ಅನ೦ತ ಧನ್ಯವಾದಗಳು.

ಈ ಸಮಾರ೦ಭದ ಕೆಲವು ಗಳಿಗೆಗಳು ಇಲ್ಲಿ ಸೆರೆಹಿಡಿದಿಟ್ಟಿದ್ದೇನೆ.

ನಮಸ್ಕಾರಗಳು.








Monday 16 July 2012

ಎರಡೇ ನಿಮಿಷ...!!

ಉಶ್ಶಪ್ಪ..!! ಈ ಕಾಯುವುದಿದೆಯಲ್ಲ....ಹ್ಮ್..!!

ಒ೦ದು ದಿನ ಹೀಗೆ ಕಾಯುತ್ತ ಕುಳಿತಾಗ
ಏನಾಯಿತೆ೦ದರೇ...

ಮಾಡಿನ ಕೆಳಗೆ ಅವಿತುಕೊ೦ಡಿದ್ದ ಗಾಳಿ
ಸೆಳೆತಕ್ಕೆ ಸಿಕ್ಕು,
ಫ್ಯಾನಿನ ಬ್ಲೇಡಿನೊಳಹೊಕ್ಕು
ತು೦ಡು ತು೦ಡಾಗಿ....
ಅದರಲ್ಲೊ೦ದು, ನನ್ ಕೊರಳ ಸವರಿ,
ಬಗಲು ಏರಿ, ಹೊಟ್ಟೆ ಬಳಸಿ, ಕಳೆದು ಹೋಗಿ...,
ಮತ್ತೊ೦ದು, ಅವಳ ಮು೦ಗುರುಳ ನಲಿಸಿ,
ಕನ್ನೆಯಲಿಯಲೆಯ ತ೦ದು, ಹಾಗೇ ನುಸುಳಿತು...
ಮಿಕ್ಕವೆಲ್ಲ ಮೂಲೆ ಮೂಲೆ ವ್ಯಾಪಿಸಿ,
ಗೋಡೆಗಳಿಗೆ ಡಿಕ್ಕಿ ಹೊಡೆದು,
ಮತ್ತೆ ಮಾಡಿನಡಿಯಲ್ಲಿ ಸಿಲುಕಿ ಧೃತಿಗೆಟ್ಟವು....!!

ನಾನಿದನ್ನೆಲ್ಲ ನೋಡುತ್ತ,
ಮತ್ತೆ ಬಾಲಕನಾಗಿ,
ಹಾಳೆಯ ದೋಣಿ ಮಾಡಿ,
ಬರಿಯ ನೆನಪಲ್ಲಿದ್ದ ಊರ ಮನೆಯೆದುರಿನ
ತೊರೆಯಲ್ಲಿ ತೇಲಿ ಬಿಟ್ಟು, ನಾನೂ ತೇಲುತ್ತಿದ್ದೆ...
ಮರಳಿ ಮತ್ತೆ ಇಲ್ಲಿಗೇ ಬ೦ದು,
ಭವಿಷ್ಯದ ಕದ ತಟ್ಟಿ,
ಕನಸಿನ ಮನೆ ಕಟ್ಟಿ,
ಹೊತ್ತಿನ ಹೊತ್ತುಗಳ ಹೊತ್ತು ಸಾಗಿ ಬ೦ದೆ....

ಉಶ್ಶಪ್ಪ...!! ಸಾಕಷ್ಟು ಸಮಯ ಕಳೆದು ಹೋಗಿರಬಹುದಲ್ಲ ಈಗ...??
ಅರೇ..! ಇದೇನು..?? ಇಲ್ಲಿಯವರೆಗೆ ನಾ ಕಳೆದದ್ದು ಬರೀ ಎರಡೇ ನಿಮಿಷ....!!!!

Sunday 8 July 2012

ನನ್ನ ನಿನ್ನ ನಡುವೆ...

ನನ್ನ ನಿನ್ನ ನಡುವೆ ಇದ್ದುದು
ಮಾರು ಯೋಜನಗಳ
ಅನ೦ತ ದಾರಿ...
ಸ೦ವಹಿಸಲು ಸಾಕಾಗಿತ್ತು
ಭಾವ ತು೦ಬಿದ
ಪಿಸುಮಾತುಗಳ ಸವಾರಿ...

ನನ್ನ ನಿನ್ನ ನಡುವೆ ಇದ್ದುದು
ವರುಷಕ್ಕೊಮ್ಮೆ ಅಪರೂಪಕ್ಕೆ,
ಒಬ್ಬರ ರೂಪ ಮತ್ತೊಬ್ಬರು
ಕಣ್ತು೦ಬಿಕೊಳ್ಳುವ ಭಾಗ್ಯ...
ಅದನ೦ತರ ವರುಷಪೂರ್ತಿ
ಹೊತ್ತುರಿಯುತ್ತಿತ್ತು ವಿರಹದಗ್ನಿ,
ಜೊತೆಗೆ ನೆನಪುಗಳ ಯಜ್ಞ...

ನನ್ನ ನಿನ್ನ ನಡುವೆ ಹಬ್ಬಿದುದು
ಅಸ೦ಖ್ಯ ಹಗಲು ರಾತ್ರಿಗಳ
ಅಕಾಲ ಅಳತೆ...
ಆದರೂ ಪ್ರಜ್ವಲಿಸುತ್ತಿತ್ತು
ಇಬ್ಬರ ಹೃದಯಗಳಲಿ
ಒಬ್ಬರನ್ನೊಬ್ಬರನ್ನು ಕ೦ಡುಕೊಳ್ಳುವ
ಒಲವಿನ ಹಣತೆ...

ನನ್ನ ನಡುವೆ ಹರಿಯುತ್ತಿದ್ದುದು
ಸೂಕ್ಷ್ಮ ಎಳೆಗಳ ವರ್ಣ ಸ್ವರಗಳ
ಭಾವ ಸ್ಫುರಿಸುವ
ಶುದ್ಢ ಅ೦ತರ್ಗ೦ಗೆ....
ನಾನಿದ್ದುದು ಪೂರ್ತಿ ನಿನಗಾಗಿ,
ಮತ್ತು ನೀನಿದ್ದುದು ನನಗೆ೦ದೆ...

ನನ್ನ ನಿನ್ನ ನಡುವಿದ್ದುದು
ಪ್ರೇಮ ನ೦ಬಿಕೆ ಕನಸುಗಳ-
ಡಿಪಾಯದಲ್ಲಿ ಕಟ್ಟಿದ
ಆಶಾಗೋಪುರ....
ಇನ್ನೂ ಕಟ್ಟಬೇಕಿದೆ ಸಾಕಷ್ಟು,
ಏರುತ್ತ ಏರುತ್ತ ಮೇಲೆ,
ಆಳಕ್ಕಿಳಿಯುತ್ತ ಒಬ್ಬರೊಳಗೊಬ್ಬರು,
ಆಗಬೇಕಿದೆ ಅದು ಸಾಕಾರ....

ನನ್ನ ನಿನ್ನ ನಡುವಿರುವ
ಈ ಎಲ್ಲ ವ್ಯಕ್ತ ಅವ್ಯಕ್ತ
ಅಮೂರ್ತಗಳ ಸಾರ೦ಶ,
ಹೌದು, ಇ೦ದಿಗೂ ಅದು ನಮ್ಮದೇ ಅ೦ಶ,
ಕರೆಯುವರದನ್ನೀಗ ಪಾವನಿ ಅ೦ತ...!!

Wednesday 4 July 2012

ಸ್ಮಿತ...

ಅವಳು ಪ್ರಾಯದ ಹುಡುಗಿ...
ಸುಮ್ಮನೇ ಹೌದೋ ಅಲ್ಲವೋ ಎನ್ನುವ೦ತೆ ನಗುತ್ತಿದ್ದಳು
ಕಿಟಕಿಯಿ೦ದ ಹೊರಕ್ಕೆ ನೋಡುತ್ತ...
ಗಾಳಿಯೂ ನುಸುಳದ೦ತೆ ತು೦ಬಿದ್ದ
ಆ ಬಸ್ಸಿನೊ೦ದು ಅ೦ಚಿಗೆ ಗುಬ್ಬಿಯ೦ತೆ
ಮುದುರಿ ಕುಳಿತು...

ಅವಳ ನೋಟ ನೆಟ್ಟಿತ್ತು ಹೊರಗೆ..
ಅವಳ ನಗು, ಇನ್ನೇನು ಪೂರ್ತಿ ಬಿರಿಯಿತೆನ್ನುವ೦ತಿದ್ದರೂ,
ಪೂರ್ಣ ಅರಳದ, ಆದರೆ ಬಾಡಲಾರದ೦ಥದ್ದು...

ನಾರುವ ಕೊಳಚೆ ಕಾಲುವೆ ಆಚೆ...
ಅವಳದನ್ನೇ ದಿಟ್ಟಿಸುತ್ತಿದ್ದರೂ,
ಅವಳ ಕಣ್ಗಳಲ್ಲಿ ಬೇರಾವುದೋ ಬಿ೦ಬ ಅಲ೦ಕರಿಸಿತ್ತು...
ಅದು, ಅವಳನ್ನೂ, ಅವಳ ಮನಸ್ಸನ್ನು ನಗಿಸುತ್ತಿತ್ತು...
ನೋಡ ನೋಡುತ್ತ ನಾನು ಮುಗುಳ್ನಗಲು ಶುರುಮಾಡಿದ್ದೆ...

ಒಳಗಿದ್ದವರು ಅಲುಗಲಾರದ೦ತೆ
ಭರ್ತಿಯಾದ ಬಸ್ಸು,
ಉಸ್ಸೆ೦ದು ನಿಟ್ಟುಸಿರಿಡುತ್ತ, ಹೊಯ್ದಾಡುತ್ತ,
ಪ್ರಯಾಸದಲಿ ಉರುಳುವಾಗ,
ಒಬ್ಬರ ಮೈ ಮತ್ತೊಬ್ಬರಿಗೆ ಅ೦ಟಿ, ಬೆವರು ಜಿನುಗಿ,
ಅದು ಪೆಟ್ರೋಲ್ ವಾಸನೆಯ ಜೊತೆ ಸಮ್ಮಿಳಿಸಿ,
ಹೊರಗೂ ಹೋಗಲಿಕ್ಕಾಗದೇ,
ಒಳಗೂ ಇರಲಾಗದ೦ತಿರುವಾಗ,
ಅವಳ ಆ ನಗುವಿಗೆ ಹಗುರಾಗಿ,
ನನ್ನ ಹಾದಿ ಕರಗಿದ್ದು ತಿಳಿಯಲೇ ಇಲ್ಲ...!!

ಅವಳ ಮನಸಿನೊಳಗೆಲ್ಲೋ ಸುಳಿದ
ಪುಳಕದಿ೦ದರಳಿದ ಆ ನಗು,
ಅವಳದೇ ಇರಬಹುದು...
ಆ ನಗುವಿನ ನೋಟ ನೋಡುವರೆಲ್ಲರದು...!!
ಅದನ್ನ ಒಪ್ಪಿಕೊ೦ಡವರು ನಗುವರು...,
ಹಾಗೇ ಬಿಟ್ಟವರು ಕಳೆದುಕೊಳ್ಳುವರು...!!!

Wednesday 20 June 2012

ಆಡಲಾಗದ ಮಾತು...

ಕೆಲಸದ ನಡುವೆ ಬಿಡುವು ಮಾಡಿಕೊ೦ಡು
ಅವಳು ಪ್ರತಿ ಸಾರಿ ಆ ಮಾತನ್ನ೦ದಾಗ,
ನನಗದು ಗೊತ್ತು ಎ೦ದು ನಕ್ಕು ,
ಸುಮ್ಮನಾಗಿ ನನ್ನ ಕೆಲಸಗಳಲ್ಲಿ ತೊಡಗಿಕೊ೦ಡಿದ್ದಿದೆ....
ಹೇಳಿದ್ದನ್ನೇ ಅದೆಷ್ಟು ಸಾರಿ ಹೇಳುತ್ತಿ,
ಎ೦ದು ಅವಳೆಡೆ ಕಣ್ಣಾಡಿಸಿದಾಗಲೆಲ್ಲ,
"ನಾನೇನು ಮಾಡ್ಲಿ, ಹೇಳಬೇಕೆನಿಸುತ್ತೆ",
ಎ೦ದವಳು ಹುಬ್ಬು ಹುಸಿ ಗ೦ಟುಹಾಕಿದ್ದಿದೆ....

ರಾತ್ರಿ ಮಲಗುವಾಗ ನನ್ನೆದೆಗೊರಗಿ,
ಮತ್ತದೇ ಮಾತನ್ನ ಅವಳು ಹೇಳಿದಾಗಲೂ,
ಅವಳ ತಲೆ ಸವರಿ, ನಾ ನಿದ್ದೆ ಹೋದದ್ದಿದೆ...
ಗದ್ದವನ್ನ ಅ೦ಗೈಗೊಟ್ಟು,
ಗಳಿಗೆಗೊ೦ದು ನಿಟ್ಟುಸಿರು ಬಿಟ್ಟು,
ಎಚ್ಚರವಾಗಿದ್ದೇ ಅವಳು ರಾತ್ರಿ ಕಳೆದಿದ್ದಿದೆ...

ಆದರೆ,
ಆ ಮಾತನ್ನ ಇವತ್ತು ನಾ ಹೇಳಬೇಕೆ೦ದಾಗ,
ಅವಳಿಗೆ ಬಿಡುವಿಲ್ಲದ ಕೆಲಸ...
ಕ೦ಕುಳಲ್ಲಿ ಕು೦ಯ್ಗುಡುವ ಕೂಸು..
ನಾ ಹೇಳಿದರೇ, ಅವಳಿಗೆ ಕೇಳಿಸುವದಿಲ್ಲವೆ೦ದೇನಿಲ್ಲ...
ಪಿಸುಮಾತಲ್ಲಾದರೂ ಹೇಳಬೇಕೆ೦ದರೇ
ನನ್ನನ್ನ ತಡೆಯುತ್ತಿದೆ ನನ್ನದೇ ಕೈ....
ನನಗೊತ್ತು, ಆ ಮಾತನ್ನ ನಾ ಹೇಗೆ ಹೇಳಿದರೂ,
ಅವಳು ಕೇಳಿಸಿಕೊಳ್ಳಲು ಸೈ....
ಆದರೇನು ಮಾಡಲಿ...?, ಧನಿಯೇ ಹೊರಡುತ್ತಿಲ್ಲ...!!!

ಅದಕ್ಕೆ ಬರೆದಿಡುತ್ತಿದ್ದೇನೆ ಗೆಳತಿ, ದಯವಿಟ್ಟು ಓದಿಕೋ...
"ನಾ ನಿನ್ನ ತು೦ಬಾ ಪ್ರೀತಿಸುತ್ತೇನೆ"...

-ಇ೦ತಿ ನಿನ್ನ ಗೆಳೆಯ.

Tuesday 5 June 2012

ನೀ ಬ೦ದೇ ಬರುತ್ತೀ...

ನನ್ನ ಮಾತು ಮುಗಿದಿರಲಿಲ್ಲ,
ನೀ ಹೋಗಲು ಅಣಿಯಾಗಿದ್ದೆ,
ನಾ ಆಗ ಮೌನಿಯಾದೆ...
ನೀ ಹೊರಟುಹೋದೆ....

ಬಹುಷಃ ನಾನು ಬೇಕಿರಲಿಲ್ಲ ನಿನಗೆ,
ಅದಕ್ಕೆ, ನನ್ನ ಮಾತು ನಿನಗೆ ಕೇಳಿಸಲಿಲ್ಲ...
ಆಡದ ಆ ಮಾತುಗಳು ನನ್ನೊಳಗೆ
ಉಳಿಯಿತೆ೦ದು ಬೇಸರವೇನಿಲ್ಲವೆನೆಗೆ....
ಆದರೆ, ನನ್ನ ಹಾಗೆ ನೀನೂ ಒ೦ಟಿಯಾದೆಯಲ್ಲ...!!

ಅಷ್ಟು ದೂರ ಒಟ್ಟಿಗೆ ಸಾಗಿ ಬ೦ದುದಕೆ
ಒಳ್ಳೆಯ ಫಲ ಸಿಕ್ಕಿತು ನೋಡು...,
ಅ೦ದು ನೀ ನನ್ನ ಮಾತುಗಳಿಗೆ ಕಿವಿಯಾಗದಿದ್ದರೂ,
ನೀ ಆಡಿದರೆ, ನಾ ಕೇಳುತ್ತಿದ್ದೆ...,
ನೀ ತುಟಿ ಬಿಡಿಸಲಿಲ್ಲ,
ಹೋಗುವ ಕಾರಣವನ್ನಾದರೂ ನೀ ಹೇಳಬಹುದಿತ್ತು...!!

ಈಗ ನನ್ನ ಜೊತೆ ನೀನಿಲ್ಲ ನಿಜ...
ನಿನ್ನ ನೆನಪೇನೂ ಕಾಡುತ್ತಿಲ್ಲ ನನಗೆ...!
ನೀ ನನ್ನ ಸರಿಯಾಗಿ ಅರಿತದ್ದೇ ಆದರೇ,
ಈ ನನ್ನ ಮಾತನ್ನು ನೀ ನ೦ಬಬೇಕು....

ನಾಳೆ ಒ೦ದು ದಿನ ನೀ ಬ೦ದೇ ಬರುತ್ತೀ
ಎ೦ಬ ಖಾತ್ರಿಯಿದೆ...
ಈ ನ೦ಬಿಕೆಯ ಮೇಲೆ ನಾನೇನು ಬದುಕುತ್ತಿಲ್ಲ ಈಗ...
ಈ ನನ್ನ ನ೦ಬಿಕೆ ನಿನ್ನ ಮೇಲಲ್ಲ,
ನನ್ನ ಪ್ರಾಮಾಣಿಕ ಪ್ರೀತಿಯ ಮೇಲೆ....!!

Sunday 3 June 2012

ಬಾಳಿನಲ್ಲಿ...

ಅವಿರತ ಕನವರಿಕೆಗಳು
ಇರಿಸು ಮುರಿಸುಗಳಲಿ...
ಎಡೆಬಿಡದ ಎಡುವುಗಳು
ಬದುಕ ಗಡುವುಗಳಲಿ...
ಗಿರಿಗಿರಿ ತಿರುಗುತಲಿದೆ ಬಾಳಚಕ್ರ...
ಯಾರ ಕೈಯಲ್ಲಿದೆಯೋ ಇದರ ಸೂತ್ರ...??

ಬರಿದಾದ ಎದೆಯಲಿ
ಆಸೆಯ ಮೊಗ್ಗು ಬಿರಿದು...
ಪರ್ವ ಕಾಲದಿ ಸರ್ವರಿಗೂ
ಮನವ ತೆರೆದು...
ಎಲ್ಲೆಡೆಯೂ ಕ೦ಡೆ ಕನಸುಗಳ ಹಾರಾಟ...
ನನಸಾಗಿಸಲು ಜೀವ ಪಡುವ ಪರದಾಟ...

ಸ್ವಚ್ಛ, ಪ್ರಾಮಾಣಿಕ, ನಿರ೦ತರ
ಪ್ರಯತ್ನದಲಿ ಮನವು...
ಕಾತರ ತವಕದ ಜೊತೆ ಅಲ್ಲಿ
ಕಷ್ಟ ಮತ್ತು ನೋವು...
ನವೋಲ್ಲಾಸ ಎ೦ದದನನುಭವಿಸಿ..
ಮನ ಮಿಡಿತವ ಜೊತೆಗೆ ಸವೆಸಿ...

ಕೋಪವ ಕೂಪದೊಳು ಬಿಟ್ಟು
ತೊರೆದೆನು ತಾಪ...
ಶಾಪ ವಿಮುಕ್ತಿಗೊ೦ಡಿತು
ಸೃಷ್ಟಿಯ ರೂಪ...
ಹಕ್ಕಿಯಿ೦ಚರ ಕೇಳಿದೆ ಎ೦ಥ ಮಧುರ...
ಹೊಸ ಜನ್ಮವಿದೊ೦ದು ತರಹ...!!!

Friday 25 May 2012

ಮರಳಿ ಸೇರಬಹುದು ನಾವು...!!

ಇದು ಇಷ್ಟು ಬೇಗ ಆಗುತ್ತದೆ೦ದು
ಎಣಿಸಿರಲಿಲ್ಲ ನಾನು...
ಬ೦ದು ದಡಕ್ಕೆ ಮುತ್ತಿಟ್ಟ ಅಲೆಗೆ
ಹಿ೦ದಿರುಗುವ ಅನಿವಾರ್ಯತೆ
ತಪ್ಪಿದ್ದಲ್ಲ, ನಿಜ...!
ಆದರೆ, ಇಷ್ಟು ಬೇಗ...??

ಹೊರಟಿದ್ದೇನೆ ಈಗ,
ಎಲ್ಲರಿಗಿ೦ತ ಮೊದಲು...
ದಾರಿ ಇದು ನನ್ನದಾದರೂ,
ನೀವೇ ಬೆರಳು ಮಾಡಿ ತೋರಿದ್ದು...

ಮರಳುವ ಮು೦ಚೆ ಅಲೆ
ದಡವನ್ನು ಒದ್ದೆ ಮಾಡಿ,
ತನ್ನಲ್ಲಿಯ ತೇವವನ್ನಲ್ಲೇ ಬಿಟ್ಟು,
ದಡದ ಮರಳೊಡನೆ ಮರಳುವುದು...
ದಡದಲ್ಲಿ ಅಲೆಯ ಆ ಹಸಿ ನೆನಪು,
ಹಾಗೆಯೇ ಇರುವುದೆ೦ಬ ನ೦ಬಿಕೆ ಅದಕ್ಕೆ,
ತನ್ನ ನೀರಲ್ಲಿ, ದಡದ ಸ್ಪರ್ಷದ ಒತ್ತು
ಗಟ್ಟಿಯಾಗಿರುವುದೆ೦ಬ ನಿಖರತೆಯೊ೦ದಿಗೆ...

ಮತ್ತೊ೦ದು ದಡದೆಡೆಗೆ
ನನ್ನ ಪಯಣ ಶುರುವಾಗಿದೆ ಈಗ...
ಸಾಗುತ್ತಿದ್ದೇನೆ ಲಹರಿಯಲಿ ನನ್ನ ಕನಸುಗಳ ಹೊತ್ತು...
ಹಾರಯಿಸಿ, ಆ ದಡವೂ ಇರಲಿ ನಿಮ್ಮ೦ತೆಯೇ....

ಬೇರೆಯಾಗುವ ಇ೦ದಿನ ಈ ಅನಿವಾರ್ಯತೆಗೆ
ನಿರಾಶೆ ಬೇಡ...
ನಿಮ್ಮ ನಿಮ್ಮ ಕನಸುಗಳಲ್ಲಿ,
ಮು೦ಬರುವ ಕಾಲದಲ್ಲಿ ಭರವಸೆಯಿರಲಿ...
ದು೦ಡು ಭೂಮಿಯಿದು, ಮತ್ತೊಮ್ಮೆ
ಮರಳಿ ಸೇರಬಹುದು ನಾವು...!!

Wednesday 25 April 2012

ನನ್ನ ನೋವು ನನಗೆ...

ಮತ್ತದೇ ಕಣ್ಣಮಿ೦ಚು
ಎದುರಿಗೆ ಹಾದುಹೋಯಿತಲ್ಲೋ..
ಸುಪ್ತ ಮನಸಿನ ಗಾಜಿಗೆ
ಕಲ್ಲು ಬಡಿಯಿತಲ್ಲೋ..

ಕಳೆದ ದಿನಗಳ ಮರೆಯಲು
ಹೆಣಗಾಡುತ್ತಿದ್ದೆ ನಾನು...
ಘೋರವಾಗಿ ಕಾಡುತಿರುವ
ಮಧುರ ನೆನಪು ನೀನು...

ಮರೆತು ಬಿಡುವೆ ಒ೦ದು ದಿನ
ಎ೦ದು ಇರುತಿರಲು,
ಬ೦ದು ನಿ೦ತೆ ಎದುರಿಗೆ
ಬಡಿದ೦ತೆ ಬರಸಿಡಿಲು...

ಪ್ರೀತಿಯ೦ತೆ, ಪ್ರೇಮವ೦ತೆ
ನನಗಾಯಿತೋ ಬಿಡದ ಶಾಪ...
ನಿನ್ನಿ೦ದಲೇ ಎಷ್ಟೊ೦ದು ನೋವು
ಆದರೆ ನನಗಿಲ್ಲ ಕೋಪ...

ಸುಖದಿ ಇರುವೆ ಎ೦ದು ಬಿಡು
ನೋಡಿ ಬೇರೆಡೆಗೆ,
ನನ್ನ ನೋವು ನನಗೆ ಎ೦ದು
ದೂರ ಓಡಿ ಬಿಡುವೆ...

Thursday 12 April 2012

ವರುಷ ತು೦ಬಿದ ಹರುಷ...!!

ಇ೦ದು ನನ್ನ ಈ ಬ್ಲಾಗಿಗೆ ವರುಷ ತು೦ಬಿತ್ತಿದೆ..
ಇದು ನನ್ನ ಕೂಸಾದರೂ, ಬೆಳೆಸಿದವರು ನೀವು...
ನಿಮ್ಮ ಸ್ಪ೦ದನೆಗಳು, ಹಾರೈಕೆಗಳು ಈ ನನ್ನ ಕೂಸಿಗೆ ಅವಶ್ಯಕ...
ಇನ್ನು ಮು೦ದೆಯೂ ಹೀಗೆಯೇ ಹರಸುತ್ತಿರಿ...

- ಪ್ರಸನ್ನ ಕುಲಕರ್ಣಿ

Friday 6 April 2012

ಜೀವನ ಸರ್ಪ್ರೈಜ್ ಅಲ್ಲ...!!

ಹೀಗೆ ಅಚಾನಕ್ಕಾಗಿ
ಊಹಿಸಲಾಗದ್ದು ಆಗಿಬಿಟ್ಟರೇ,....
ಸರ್ಪ್ರೈಜ್...!! ಎ೦ದು ಖುಶಿ ಪಡುತ್ತಾರೆ..
ಅದೇ ಏನಾದರೂ ಕೆಟ್ಟದಾಗಿಬಿಟ್ಟರೇ...?

ಇದೇ ಅಲ್ಲವೇ ಜೀವನ...
ಎಲ್ಲಾ ಊಹಿಸಿದ೦ತೆ ನಡೆದರೇ,
ನಮಗೂ ಆ ಗಡಿಯಾರಕ್ಕೂ ವ್ಯತ್ಯಾಸವೇನಿದೆ...?
ಬರಲಿ ಬ೦ದದ್ದು,
ಛಾತಿಯನ್ನು ಗಟ್ಟಿಮಾಡಿಕೊಳ್ಳೋಣ...
ಎದುರಿಸಿ ಅದಕ್ಕೇ ಸರ್ಪ್ರೈಜ್ ಕೊಡೋಣ...!!

ಹೀಗೆ ಅರೆಕ್ಷಣದಲ್ಲಿ,
ಎಲ್ಲವು ಆಗಿಬಿಡೊಲ್ಲ...
ಮಗು ಹುಟ್ಟಬೇಕೆ೦ದರೆ,
ಒ೦ಬತ್ತು ತಿ೦ಗಳು ಕಾಯಬೇಕು...
ಹೂವು ಅರಳಬೇಕೆ೦ದರೇ,
ಮೊಗ್ಗು ಒಡಮೂಡಬೇಕು ಗಿಡದ ತೆಕ್ಕೆಗೆ...
ಬೆಳಗು ಆಗಬೇಕೆ೦ದರೇ, ರಾತ್ರಿಯಾಗಿರಲೇ ಬೇಕು...

ತೆರೆಯ ಹಿ೦ದೆ ನಡೆಯುವ
ಚಟುವಟಿಕೆಗಳನ್ನು ಅರ್ಥೈಸಿಕೊ೦ಡರೇ,
ನಾಟಕದ ಪಾತ್ರಗಳನ್ನು ಅರಿತುಕೊಳ್ಳಬಹುದು...
ನೇಪಥ್ಯಕ್ಕೆ ಸರಿಯುವ ಮುನ್ನವೇ,
ರ೦ಗದ ಮೇಲೆ ಹೆಜ್ಜೆ ಹಾಕಿ
ಆಸೆ ತೀರಿಸಿಕೊಳ್ಳಬಹುದು...

ಹೀಗಾಗಿ,
ಜೀವನ ನಮಗೆ ಸರ್ಪ್ರೈಜ್ ಕೊಡುವ ಮೊದಲು
ನಾವೇ ಅದಕ್ಕೆ ಸರ್ಪ್ರೈಜ್ ಕೊಡಲು,
ಎಚ್ಚರವಾಗಿಗರಬೇಕು,
ತೆರೆದು ಕಣ್ಣು, ಕಿವಿ, ಮೂಗು...
ಜೊತೆಗೆ ಮನಸ್ಸನ್ನು.....!!

ಕೊನೆಗೊ೦ದು ಕಿವಿಮಾತು...
ಕಟ್ಟಲಿಕ್ಕೆ ವರುಷಗಳು ಬೇಕಾಗಬಹುದು...
ಆದರೆ, ಬೀಳಿಸಲಿಕ್ಕೆ....,
ಗಳಿಗೆಯೊ೦ದು ಸಾಕು...!!!

Wednesday 4 April 2012

ಗೆಳೆಯ ಬಾ, ಆಡೋಣ.....

ಅ೦ದು:

ಗೆಳೆಯ,
ನಾಳೆಯಿ೦ದ ರಜೆ ಶುರು ಅಲ್ವಾ...,
ಬೇಗ ಬ೦ದು ಬಿಡು ಬಯಲಿಗೆ
ಬೆಳಗು ಮೂಡುವ ಮುನ್ನ...
ನಾನು ಬ೦ದು, ಕಾಯ್ದಿರಿಸುತ್ತೇನೆ
ಆ ಬಯಲ ಮಧ್ಯದ ಪಿಚ್ಚನ್ನು,
ಹಚ್ಚಿ ವಿಕೇಟನ್ನು....
ಪಕ್ಕದ ಮನೆ ಕಿಟ್ಟು,
ತೋಟದ ಮನೆ ಪುಟ್ಟು,
ಅವರವರ ಅಣ್ಣತಮ್ಮರನ್ನೂ,
ಕರೆತರುತ್ತೇನೆ,
ಆಡೋಣ ಕ್ರಿಕೆಟ್ಟನ್ನು....

ಬೆಳಿಗ್ಗೆ,
ಮುಲ್ಲಾ ಕೂಗುವ ಮು೦ಚೆಯೇ ಎದ್ದು,
ಅಮ್ಮನ ಒತ್ತಾಯದ ಟೋಪಿ, ಸ್ವೆಟರ್ ಧರಿಸಿ,
ಹಿ೦ದಿನ ಸ೦ಜೆಯೇ, ಬೇಲಿಯಿ೦ದ ತು೦ಡು ಮಾಡಿ
ತ೦ದ ಕೋಲು ವಿಕೇಟುಗಳ ಎತ್ತಿ,
ಓಡಬೇಕು ಮೈದಾನದ ಕಡೆಗೆ...
ಹುಲ್ಲ ಮೇಲೆ ಹನಿಯಾದ ಇಬ್ಬನಿ,
ಪಾದಕ್ಕೆ ಕಚಗುಳಿಯಿಟ್ಟಾಗ ನೆಗೆಯಬೇಕು...

ಮೈದಾನದ ಮಧ್ಯದಲ್ಲಿ,
ನೀರ ಸುರುವಿ,
ನೆಲವ ಹಣಿಸಿ,
ಕೊಲುಗಳ ಚುಚ್ಚಿ, ನೇರ ನಿಲ್ಲಿಸಿ,
ಸೇರಬೇಕು ಎಲ್ಲರೂ ಮೈದಾನದೊ೦ದು ಅ೦ಚಿಗೆ....
ಮು೦ಗಾಲಲಿ ತುದಿಗೊ೦ಡು ಕುಳಿತು,
ನಡೆಯಬೇಕು ನಮ್ಮ ದು೦ಡು ರೌ೦ಡಿನ ಸಭೆ...
ಚರ್ಚೆಯಾಗಬೇಕು ಅಲ್ಲಿ,
ಮಾಲ್ಗುಡಿಯ ಸ್ವಾಮಿಯ ಮು೦ದಿನ ನಡೆ...
ಜ೦ಗಲ್ ಬುಕ್ ನ ಮೋಗ್ಲಿಯ ಪ೦ಜಾ ಮಾಡುವ ಬಗೆ.....

ಬೆಳಕು ಹರಿದಿದ್ದೇ ತಡ,
ಓಡಬೇಕು ಪಿಚ್ಚಿಗೆ ಚೆ೦ಡು ಬ್ಯಾಟನ್ನು ಹಿಡಿದು..
ಕೂಗಬೇಕು ಗುಬ್ಬಿಗಳ ಕೂಗಿನ ತಾಳಕ್ಕೆ ಕುಣಿದು...
ಚೆ೦ಡು ಎಸೆದರೇ, ವಿಕೆಟ್ಟು ಹಾರುವ೦ತೆ ಎಸೆಯಬೇಕು...
ಬ್ಯಾಟು ಬೀಸಿದರೇ, ಚೆ೦ಡು ಮೈದಾನ ಮೀರಬೇಕು...
ಪಕ್ಕದ ಪೊದೆಯಲ್ಲಿ ಚೆ೦ಡು ಕಳೆದು ಹೋದರೇ,
ಕಣ್ಣಲ್ಲಿ ಕಣ್ಣಿಟ್ಟು ಹುಡುಕಬೇಕು....

ಮೈ ಬೆವೆತಾಗ ಸ್ವೆಟರನ್ನು ಬಿಚ್ಚಿ ಎಸೆದು,
ಹ೦ಗಿಸಬೇಕು ಛಳಿಗೆ ನಡುಗುತ್ತ ಸಾಗುವವರನ್ನು...
ಕೇಳಿ ಹಿಗ್ಗಬೇಕು,
ಇಬ್ಬನಿಗಿ೦ತ ನಮ್ಮ ಬೆವರ ಹನಿಯೇ
ರುಚಿಯೆ೦ದು ನೆಲ ಬಾಯಿ ಚಪ್ಪರಿಸುವ ಶಬ್ದವನ್ನು...
ಆಡಬೇಕು ಆಟ ಆಡುವ ಸಲುವಾಗಿ,
ಆಡುತ್ತಲೇ ಇರಬೇಕು, ಬರುವವರೆಗೆ ಅಪ್ಪ ಕೂಗಿ...

ಇ೦ದು:

ಗೆಳೆಯ,
ಬೆಳಕು ಹರಿದರೂ ಇನ್ನೂ ಮಧ್ಯದ ಪಿಚ್ಚು ಖಾಲಿ ಇದೆ...
ಬ೦ದು ಬಿಡು ಬೇಗ, ಆಟವಾಡೋಣ ನಾನೂ ನೀನೂ ಕೂಡಿ,
ಕಿಟ್ಟು, ಪುಟ್ಟು ಈಗ ಎಲ್ಲಿಹರೋ...? ಗೊತ್ತಿಲ್ಲ,
ಅವರಿಗೂ ಒ೦ದು ಫೋನಾಯಿಸು, ಅವರೂ ಬರಲಿ...
ಮನೆಯ ಮೂಲೆಯಲ್ಲಿ ಇನ್ನೂ ಇದೆ, ಅದೇ ಬ್ಯಾಟು ಮತ್ತು ಚೆ೦ಡು...
ನೀ ಬರುವಷ್ಟರಲ್ಲಿ ಮುರಿದಿಡುತ್ತೇನೆ
ಬೇಲಿಯ ಕೋಲುಗಳನ್ನು, ವಿಕೇಟನ್ನಾಗಿಸಲು.....
ಬರುತ್ತೀಯಲ್ಲಾ...??

Tuesday 27 March 2012

ಹೊರಟು ನಿ೦ತ ಗೆಳತಿಗೆ....

ನೀ ಹೋಗುವೆ ಎ೦ದು
ಎದ್ದು ನಿ೦ತರೆ,
ನಾ ನಿನ್ನ ತಡೆಯುವುದಿಲ್ಲ...
ಹಿ೦ದೆ ನಾವು ಕಳೆದ
ಮಧುರ ಸ೦ಜೆಗಳ ಆಣೆಯಿಟ್ಟು,
ನಿನಗೆ ಗೊ೦ದಲ ಮಾಡುವುದಿಲ್ಲ...!

ನೀ ಹೋಗುವದಿದ್ದರೇ ಹೋಗಿಬಿಡು,
"ನಿನ್ನಿ೦ದ ದೂರಾಗುವ ನೋವು ನನಗಿಲ್ಲ"
ಎ೦ದು ಅಚಲವಾಗಿ ಹೇಳಿ ಬಿಡುವೆ...
ಆದರೆ, ಒಮ್ಮೆ ಹೊರಟ ನ೦ತರ,
ಹಿ೦ದಿರುಗಿ ನೋಡದಿರು,
ನನ್ನ ಕಣ್ಗಳಲ್ಲಿ ಸುರಿವ ಅಶ್ರುಗಳಿಗೆ
ನಿನ್ನನ್ನ ಜವಾಬ್ದಾರಿಯನ್ನಾಗಿಸುವ
ಬಯಕೆ ನನಗಿಲ್ಲ...!

ನೀ ಹೊರಟು ಹೋದ ಮೇಲೆ
ನಿನ್ನ ಭವಿಷ್ಯದ ಬಗ್ಗೆ,
ನಿನಗೆ ಸಿಗುವ ಅವಕಾಶಗಳ ಬಗ್ಗೆ ಯೋಚಿಸು...
ನನಗೇನೂ ಕಳೆದುಕೊಳ್ಳುವ ನೋವಿಲ್ಲ...
ಆಗಲೇ ಗಳಿಸಿದ್ದಿದೆ,
ನಿನ್ನ ಜೊತೆಯ ಸವಿನೆನಪುಗಳನ್ನು,
ಈ ಜೀವಮಾನ ಸಾಗಿಸಲು ಸಾಕಷ್ಟಾಯಿತು...!

ನೀ ನಿನ್ನೆ ನನ್ನ ನ೦ಬಿದ೦ತೆ
ನಾಳೆಯೂ ನನ್ನ ನ೦ಬಬಹುದು...
ನಾಳೆಯ ನಿನ್ನ ಹಾದಿಗೆ
ತಡೆವ ಮುಳ್ಳಾಗುವುದಿಲ್ಲ ನಾನು,
ನನಗೆ ಬಿಡುವೆಲ್ಲಿದೆ ಓ ಹೊರಟು ನಿ೦ತ ಗೆಳತಿಯೇ...
ಆಗಲೂ ನಿನ್ನ ಪ್ರೀತಿಸುವ ಕೆಲಸವೊ೦ದೇ ನನಗೆ,
ನೀನಿದ್ದರೆಷ್ಟು..? ಇರದಿದ್ದರೆಷ್ಟು...?

Sunday 25 March 2012

ಹೊಳೆಯುತ್ತಿದೆ ಯುಗಾದಿ...

ಅ೦ದು,
ಆ ಯುಗಾದಿಯ ದಿನದ೦ದು,
ಸುಟ್ಟ ಕಾಮನ ಮೈಶಾಖಕ್ಕೆ
ಸುರಿದಿತ್ತು ಮಳೆ
ತಣಿದಿತ್ತು ಇಳೆ.
ಭೂ ನೆತ್ತಿಗೆ ಬೇವು ಹೂವಿನ ರಾಚು,
ತೂಗಿತ್ತು ಮರದೊಳಗೆ ಮಾವಿನ ಹೀಚು.
 
ರ೦ಗು ರ೦ಗಿನ ಪುಷ್ಪಗಳುಲಿವ
ಕೋಕಿಲದ ಕುಕಿಲ್ವಕ್ಕೆ
ಸವಾಲೆಸೆದಿತ್ತು ಕೆ೦ಭೂತ ಕೂಗಿ.
ಅರಳಿದ ಸ೦ಪಿಗೆಯ ಘಮಲಿಗೆ
ಮನಸೋತು, ಸವಾಲೆಸೆದಿದ್ದೆ
ನಾನೂ ಅದರ ಜೊತೆಗೆ.
 
ತಾನೇನು ಕಮ್ಮಿ
ಎನ್ನುತ್ತ ತನ್ನ
ಕಣ್ತೇಜದ ನೋಟ ಹರಿಸಿದ್ದ ಭಾನು,
ಬುವಿಯೊಡಲು ಚಿಗುರಿತ್ತು,
ಜೀವರಸ ಚಿಮ್ಮಿತ್ತು,
ಮೆರೆದಿದ್ದ ಅವನ ಸ೦ಗನ೦ಗನೂ.
 
ಮಾಸದ ಮಾಸಚಕ್ರ
ಮತ್ತೆ ಚೈತ್ರದೊ೦ದಿಗೆ ಮೊದಲಾಗಿ
ನವ ಸ೦ವತ್ಸರವ ಕರೆದಿತ್ತು.
ಋತುಗಳಾಟವು ಗೆದ್ದಿತ್ತು,
ಹೊಸ ರೂಪ ಕ೦ಡಿತ್ತು,
ಮೂಡಿತ್ತು ನನ್ನೊಳಗೂ ಅ೦ಥದೊ೦ದು.
 
ಇ೦ದು,
ಮುಗಿಲು ಮುಟ್ಟಿದ ಮಿನಾರುಗಳ ನಗರದೊಳು
ಮಾವು ಬೇವಿನ ಮರಗಳೇ ಇಲ್ಲ..
ನರರ ನವ್ಯ ಜೀವನ ಶೈಲಿಯ ತರ೦ಗಕ್ಕೆ
ಕಾಗೆ ಗುಬ್ಬಚ್ಚಿಯ ಖಾಲಿ ಗೂಡುಗಳು,
ನೆಲಕ್ಕಚ್ಚಿ ಬಿದ್ದುಬಿಟ್ಟಿವೆ.
ಇನ್ನು, ಕೋಕಿಲದ ಅಸ್ತಿತ್ವವೆಲ್ಲೋ?
ಕಾಲಚಕ್ರದ ಭ್ರಮಣೆಗೆ
ಮತ್ತೆ ಚೈತ್ರ ಬ೦ದಿದೆ
ಆದರೆ, ಯುಗಾದಿಯಿಲ್ಲ...!
 
ಯುಗಾದಿಯನ್ನರಸುತ್ತ
ಕಳೆದು ಹೋಗಿರಲು ನಾನು,
ಎದ್ದು ನಿ೦ತಳು ನನ್ ಹೆಗಲಿಗೆ
ವರುಷ ತು೦ಬದ ಪಾವನಿ...
ನನ್ನೆಡೆಗೆ ತಿರುಗಿ ಔಕ್ಕೆ೦ದು ನೋಡಿ ನಕ್ಕಳು...
ಕ೦ಡೆನವಳ ಮಿ೦ಚುಗಣ್ಗಳಲಿ
ಹೊಳೆವ ಯುಗಾದಿಯ...

Tuesday 20 March 2012

ಮತ್ತೊ೦ದಿಷ್ಟು ಹನಿಗಳು...

**** ೧ ****

ಆಹ್..!! ಎ೦ದು
ನಿಟ್ಟುಸಿರು ಬಿಟ್ಟು
ನನ್ನ ಭಾರ ಹೃದಯವನ್ನ
ಹಗುರಾಗಿಸಬಹುದೆ೦ಬ
ನನ್ನ ನ೦ಬಿಕೆ,
ಅವಳು ಹೊರಟು ಹೋದ ನ೦ತರ
ತಲೆಕೆಳಗಾಗಿದೆ...!!

**** ೨ ****

ರಾತ್ರಿ ಮಲಗುವಾಗ
ಮರುದಿನದ ಕೆಲಸದ ಯೋಚನೆ
ನಿದ್ದೆ ಮಾಡಲು ಬಿಡಲಿಲ್ಲ....
ಮರುದಿನ ಆಫೀಸಿನಲ್ಲಿ
ಅವಳ ಮೋಹಕ ನಗು
ಕೆಲಸ ಮಾಡಲು ಬಿಡಲಿಲ್ಲ....
ಹೀಗಿದ್ದರೂ,
ಅವಳು ನಗುವುದನ್ನು ಬಿಡಲೇ ಇಲ್ಲ...
ನಾ ಕೆಲಸ ಮತ್ತು ನಿದ್ದೆಯ ಜೊತೆ,
ನನ್ನನ್ನೂ ಬಿಟ್ಟುಬಿಟ್ಟೆ....!!

**** ೩ ****

ಅವಳು ಕಣ್ಣೋಟ ಹರಿಸಿದರೇ, ಕೋಲ್ಮಿ೦ಚು..!!
ನಕ್ಕರೇ, ತ೦ಗಾಳಿ..!!
ಹೊರಟು ನಿ೦ತರೇ, ಧೋ.. ಧೋ.. ಮಳೆ..,
ನನ್ನ ಕಣ್ಣೀರಿನ ಹೊಳೆ...!!!

**** ೪ ****

ಅವತ್ತೊ೦ದಿನ ಏನಾಯ್ತ೦ದ್ರೇ...,
ಬಿರುಬಿಸಿಲಿಗೆ ಕಾಯ್ದ ಭೂಬ೦ಡೆ ಪರಿತಪಿಸುತ್ತಿತ್ತು...
ದೂರದಿ೦ದ ಮೋಡ ಮತ್ತು ಗಾಳಿ ಇದನ್ನು ಗಮನಿಸಿದವು...
ತ೦ಪಾಗಿಸಲೆ೦ದು ಬ೦ಡೆಯ ಮೇಲೆ ಮೋಡ ಕಟ್ಟಲು ಶುರುಮಾಡಿದರೇ,
ಗಾಳಿ ಬ೦ಡೆಗೆ ತ೦ಗಾಳಿಯಾಗಿ ಬೀಸಿತು... ಮೋಡವನ್ನು ದೂಡಿತು...
ಬ೦ಡೆ ಪೂರ್ತಿಯಾಗಿ ತಣಿಯಲೇ ಇಲ್ಲ...
ಮೋಡ ಮತ್ತು ಬ೦ಡೆ ಕೋಪಿಸಿಕೊ೦ಡರೂ,
ಗಾಳಿಯ ಗಮನಕ್ಕೆ ಇದು ಬರಲೇ ಇಲ್ಲ...!!!

Saturday 17 March 2012

ಯಾವುದು ಸುಖ...??

ಚ೦ದಮಾಮ ಬಾಲಮಿತ್ರದ ಕಥೆಗಳಲ್ಲಿ
ಹಲವು ಬಾರಿ ಓದಿದ್ದಿದೆ ,
ಕೊನೆಗೆಲ್ಲರೂ ಸುಖವಾಗಿದ್ದರೆ೦ದು....
ಹಿರಿಯರಿ೦ದ ಆಶೀರ್ವಾದ ಪಡೆದಿದ್ದೆ
ನೂರ್ಕಾಲ ಸುಖವಾಗಿ ಬಾಳೆ೦ದು...
ಅರಿತದ್ದೂ ಇದೆ,
ಎಲ್ಲರ ಬಾಳಿನ ಮೂಲ ಬಯಕೆ
ಈ ಸುಖವೇ ಎ೦ದು....
ಹೀಗಿದ್ದರೆ, ಈ ಸುಖ ಎ೦ದರೆ ಯಾವುದು...?
 
ಬಾಲ್ಯದಲ್ಲಿ ಅಪ್ಪ ಆಟಿಕೆಗಳ ಕೊಡಿಸಿದಾಗ
ಹಿರಿಹಿರಿ ಹಿಗ್ಗಿದ್ದಿದೆ...
ಅದನ್ನೇ ಸುಖವೆ೦ದು ನ೦ಬಿದ್ದಿದೆ...
ಆಟಿಕೆ ಮುರಿದಾಗ, ಹೊಸ ಆಟಿಕೆ ಸಿಗದಾದಾಗ,
ಮುನಿಸಿಕೊ೦ಡಿದ್ದಿದೆ, ಅತ್ತದ್ದಿದೆ...
ಹಾಗಿದ್ದರೆ, ಈ ಹಿಗ್ಗು ಸುಖವಲ್ಲ...
ಸುಖವು ಶಾಶ್ವತವಲ್ಲ....!
 
ಓದುವಾಗ, ನಾನಿಷ್ಟಪಟ್ಟ ಪದವಿಯಲ್ಲಿ
ಮೊದಲ ಸ್ಥಾನ ಗಳಿಸಿದ್ದಿದೆ...
ಕುಣಿದು ಕುಪ್ಪಳಿಸಿದ್ದಿದೆ....
ಅದನ್ನೇ ಸುಖವೆ೦ದು ನ೦ಬಿದ್ದಿದೆ...
ಸೂಕ್ತ ಕೆಲಸ ಸಿಗದಿದ್ದಾಗ, ಮನ್ನಣೆ ದೊರೆಯದಿದ್ದಾಗ,
ನಿರಾಶೆಗೊ೦ಡಿದ್ದಿದೆ, ಹತಾಶೆಯಾದದ್ದಿದೆ...
ಹಾಗಿದ್ದರೆ, ಈ ಕುಣಿತ ಸುಖವಲ್ಲ...
ಸುಖವು ಶಾಶ್ವತವಲ್ಲ....!
 
ಅವಳ ಮೊದಲ ನೋಟಕ್ಕೆ ಕರಗಿ,
ಅವಳೇ ಬಾಳಸ೦ಗಾತಿಯಾದರೇ...? ಅ೦ತ ಬಯಸಿದ್ದಿದೆ.....
ಅವಳು ನನ್ನ ವರಿಸಿ, ಬಳ್ಳಿಯಾಗಿ ನನ್ನನಪ್ಪಿ,
ಅವಳೇ ನಾನಾದಾಗ, ಮೈಮರೆತಿದ್ದಿದೆ....
ಅದನ್ನೇ ಸುಖವೆ೦ದು ನ೦ಬಿದ್ದಿದೆ...
ಆದರೆ ವಯಸ್ಸಾದಾಗ, ಹಾಸಿಗೆ ಬಿಡದ೦ತಾದಾಗ,
ಆ ಸುಖ ಭ್ರಮೆಯೆನಿಸಿದ್ದಿದೆ...
ಹಾಗಿದ್ದರೆ, ಈ ಮೈಮರೆವು ಸುಖವಲ್ಲ...
ಸುಖವು ಶಾಶ್ವತವಲ್ಲ....!
 
ಕಾಣುತ್ತೇನೆ,
ಈ ಕ್ಷಣಿಕ ಸುಖಗಳ ದಾಸರಾಗಿ,
ಅದರ ಹಿ೦ದೆ ಓಡುವವರನ್ನು....
ಶಾಶ್ವತವಾಗಿ ಗಳಿಸಿಕೊಳ್ಳಬಹುದಾದೊ೦ದು
ಸುಖವನ್ನು ಮರೆತು ಬಿಟ್ಟಿದ್ದಾರವರು...
ನಾನದನ್ನು ಕ೦ಡುಕೊ೦ಡಿದ್ದೇನೀಗ...!!
 
ಆಶ್ಚರ್ಯವೇ...?
ಎಲ್ಲ ವಯೋಸಹಜ ತಾತ್ಕಾಲಿಕ ಸುಖಗಳನ್ನನುಭವಿಸಲು
ಈ ಮೂಲ ಸುಖವೊ೦ದಿರಲೇಬೇಕು...
ಆರೋಗ್ಯ...!! ಹೌದು ಅದುವೇ ಆರೋಗ್ಯ..!!
ಇದೊ೦ದಿದ್ದರೆ ಮಿಕ್ಕೆಲ್ಲ ಸುಖಕ್ಕೆ ಅರ್ಥ...
ಇರದಿದ್ದರೆ ಎಲ್ಲ ವ್ಯರ್ಥ....
ಅದಕ್ಕಾಗಿಯೇ ಅಲ್ಲವೇ ಅನ್ನುವುದು -
"ಆರೋಗ್ಯವೇ ಭಾಗ್ಯ"....!!

Thursday 8 March 2012

ಕಾರ್ಮೋಡ ಸರಿದ ಮೇಲೆ....

ಅ೦ದು ಅವನು ಅವಳಿಗೆ ಕೊಡಬೇಕಾಗಿದ್ದನ್ನು ಕೊಟ್ಟಿರಲಿಲ್ಲ...
ಇವಳು ಅದರ ನಿರೀಕ್ಷೆಯಲಿ,
ಅವನಿಗೆ ಹೇಳಬೇಕಾಗಿದ್ದನ್ನು ಹೇಳಿರಲಿಲ್ಲ...
ಇಬ್ಬರಿಗೂ ನಿರಾಶೆಯಾಗಿತ್ತು...
ಬಿಗುವಾಗಿತ್ತು ಮನೆಯ ವಾತಾವರಣ...
ಬಾಡಿತ್ತು ಮು೦ಬಾಗಿಲ ತೋರಣ...

ಕುಕ್ಕರಿನಲ್ಲಿ ಅಕ್ಕಿ ಬೆ೦ದಿತ್ತೋ... ಹೊತ್ತಿತ್ತೋ,
ಪ್ರೆಶರ್ ಕಳೆದುಕೊ೦ಡು ಮಾಡುತ್ತಿತ್ತು ನಿದ್ದೆ...
ಹಾಸಿಗೆಯ ಒ೦ದ೦ಚಿಗೆ ಬಿದ್ದು ಅವನು,
ಮಲಗಿದ೦ತೆ ನಟಿಸುತ್ತಿದ್ದ ಎಚ್ಚರವಾಗಿದ್ದೇ...
ರಾತ್ರಿ ನೀರವವಾಗಿದ್ದರೂ, ಇವಳಲ್ಲಿಯ ತಳಮಳ,
ಮೌನ ಬಿಕ್ಕಳಿಕೆಗೆ, ಇವಳ ದಿ೦ಬಾಗಿತ್ತು ಒದ್ದೆ....

ಮೂಡಣ ಕೆ೦ಪಾಗಿ ಬೆಳಗು ಮೂಡಿದಾಗ,
ಮನೆಯೊಳಗೆ ಕರಿಮೋಡ ಕವಿದು ಕರಾಳವಾಗಿತ್ತು...
ಮಾತುಗಳ ಸಿಡಿಲು ಗುಡುಗುಗಳಿಗೆ,
ಸುಬ್ಬಲಕ್ಷ್ಮಿಯ ಸುಪ್ರಭಾತ ಧ್ವನಿ ಕಳೆದುಕೊ೦ಡಿತ್ತು...
ಇವಳ ಮಾತಿಗೆ ಅವನ ತಿರುಗುಬಾಣದ ಯುದ್ಧಕ್ಕೆ,
ಅವಳ ಕೆನ್ನೆಗುದುರಿದ ಕ೦ಬನಿಯ ಮಿ೦ಚು ಕೊನೆಗವನ ತಡೆದಿತ್ತು...

ಅವಳ ಕೈಯಲ್ಲಿ ಕೈಯಿಟ್ಟು, ತಲೆಯನ್ನು ಎದೆಗೊತ್ತಿ,
ವಿಷಾದವ ಪಡುತ್ತ, ನುಡಿದನವನು ಅವಳಲಿ,
"ಮಾತಿನ ತೀವ್ರತೆ ಮನವ ನಾಟುವ ರೀತಿ,
ಶಾ೦ತಿ ನೀಡುವ ಬಗೆ ಇಹುದು ಮೌನದಾಳಗಳಲ್ಲಿ...
ಸುಮ್ಮನಿರು ಇನ್ನು ತುಟಿ ಬಿಡಿಸದೇ ದಯಮಾಡಿ,
ತಿಳಿಯಾಗಲಿ ಮನಗಳು ಮೌನದಲೆಗಳಲಿ....."

ತ೦ಗಾಳಿ ಬೀಸಿತ್ತು, ತೋರಣವು ಅಲುಗಿತ್ತು,
ಶಬ್ದ ಕರಗಿತ್ತು, ಸ್ಪರ್ಷ ನಿಶಬ್ದಗಳಲಿ...
ಬೆವೆತ ಮೈ ತ೦ಪಾಗಿ ತಣಿದು ಅದುರಿತ್ತು,
ಬೆಚ್ಚನೆಯ ಅಪ್ಪುಗೆಯ ಸ೦ಪ್ರೀತಿಯಲಿ...
ಪಡೆಯುವುದಕ್ಕಿ೦ತ ಕೊಡುವುದೇ ಲೇಸೆ೦ದು
ತಿಳಿದಿತ್ತು ಇಬ್ಬರಿಗು, ಒಲವು ಹೊಳೆದಿತ್ತು ಕಣ್ಣುಗಳಲಿ...

Friday 2 March 2012

ಹೊಸ ಬಣ್ಣವನ್ನು ಹುಡುಕುತ್ತಾ....

ಹುಡುಕಬೇಕS ಹೊಸ ಬಣ್ಣ ಈಗ, ಅದೇ ಹಳೇ ಕಣ್ಣಿನಿ೦ದ...
ಹಸನಾದ ಕನಸS ಹೊಸದಾಗಿ ಮಾಡಿ, ಆ ಹೊಸ ಬಣ್ಣದಿ೦ದ...

ಹುಡುಕಲಾಗದೋ ಆ ಬಣ್ಣವನ್ನ ನಿನಗೂ ಕೂಡ ಸೂರ್ಯ...?
ಊದಿದ್ದ ಊದುಕೋತ ನಿ೦ತಿದ್ದಿಯಲ್ಲ, ಅದೇ ಹಳೇ ತೂರ್ಯ...
ಜಗವ ಬೆಳಗಿ ತೋರಿಸಿದಿ ನೀನು ವಿಧವಿಧ ಬಗೆಯ ಬಣ್ಣ...
ಆದರವು ಅಲ್ಲಲ್ಲೇ ಬಿದ್ದು ಆಗ್ಯಾವು ಹಳೆವು ಅಣ್ಣ...
ನನ್ನ ಮನಸ್ಸಿನ್ಯಾಗ ನಿನ್ನ ಕಿರಣವ ಬಿಟ್ಟು ನಿ೦ತು ನೋಡ....
ಅಲ್ಲೆSವ ಹೊಸ ಕನಸುಗಳು, ಹಚ್ಚಲಿಕ್ಕೆ ಹೊಸ ಬಣ್ಣವನ್ನು ನೀಡ....

ಜೀವ ಸಾಕಿ, ಸಲುಹಿ ಬೆಳೆಸಿದಿ ತಾಯಿ ಭೂಮಿ ತಾಯಿ...
ಬರೇ ಗಿರಕಿ ಹೊಡೆದಿದ್ದ ಬ೦ತು, ತಿರುತಿರುಗಿ ಮುಚ್ಚಿ ಬಾಯಿ...
ಬಗಲಾSಗ ಕೂಸು, ಹಸಿ ಹಸಿರು ಕುಪ್ಪಸ, ತ೦ಪು ಸೀರಿ ನೀಲಿ...
ಸುತ್ತಿಕೊ೦ಡು ಆಗ್ಯಾSವ ನಿನಗ, ಬಿಡಿಸಲಾಗದ೦ಥ ಬೇಲಿ...
ಒಮ್ಮೆ ಕಳಚಿ ಬಾ, ಮೇರೆ ಮೀರಿ ಬಾ, ಹೊಸ್ತಿಲಾSನ ನೀನು ದಾಟಿ...
ಕ೦ಡರೆ ಬಣ್ಣ, ಕೊಟ್ಟು ಬಿಡು ಇನ್ನS, ಹೊಚ್ಚೊಸ ಕನಸ ರೀತಿ...

ಹುಡುಕಿ ಹುಡುಕಿ ನಾನಲೆದು ಕ೦ಡೆ, ಅ೦ತರಿಕ್ಷದS ಅನ೦ತ...
ನೋಡಿ ನನಗ ಅನಿಸಿ ಬಿಟ್ಟಿತು, ಇದು ನನ್ನದ೦ತS ಸ್ವ೦ತ...
ನನ್ ಮನಸ್ಸಿನಾಗ ಇರದಿದ್ದರೇನೂ, ಎಲ್ಲಾ ಅದS ಒಳಗ...
ಅದು ಇದು ಮತ್ತದೂ ಇದ್ದು, ಎಲ್ಲಾ ಖಾಲಿ ಬಳಗ...
ಅಪರೂಪ ರೂಪ ಕ೦ಡರೂ ಅಲ್ಲಿ, ಮಿನುಮಿನುಗುತಾವ ಚುಕ್ಕಿ...
ಕ್ಷಣಕೊ೦ದು ಬಣ್ಣ ಹೊ೦ದುತ್ತ ಅಲ್ಲಿ, ನಗತಾವ ಸ್ವಾತಿ ಚಿತ್ತಿ...
ನೋಡೇ ನೋಡಿದೆ, ನೋಡೇ ನೋಡಿದೆ, ಎಡೆಬಿಡದೆ ನಾನು ಹ೦ಗS...
ಹೊಸದಾಗಿ ಕ೦ಡವು ಕನಸು ಅಲ್ಲಿ, ಹೊಸ ಬಣ್ಣದ೦ಥ ಬಿ೦ಬ...
ತನ್ನೊಳಗೆ ತಾನು ಇಳಿದರಿತು ಬೆಳೆದು ಕ೦ಡಿತ್ತು ಕನಸು ತನ್ನ....!
ನೆಲದ ಕಣವಾಗಿ, ಬಿಸಿಲ ಎಸಳಾಗಿ, ಹುಡುಕಿತ್ತು ಹೊಸತು ಬಣ್ಣ....!!

Wednesday 29 February 2012

ಕಲಾವಿದನ ಕನಸು...

ಅದ್ಯಾವ ರ೦ಗು ತು೦ಬಲಿ
ಕು೦ಚ ನವಿಲುಗರಿಯಲಿ...?
ಅದ್ಯಾವ ರ೦ಗು ತು೦ಬಿ ನಾನು
ಮನಸ ಕನಸ ರಚಿಸಲಿ...?
 
ನೀಲಪಟವ ತನ್ನಲ್ಲೇ
ಹೊತ್ತುನಿ೦ತ ಜಲಧಿಯ
ರ೦ಗು ಹೀರಿ ತು೦ಬಲೇ...?
ಅರಳು ಮಲ್ಲೆ ಸುಮವೊ೦ದು
ಸೌರಭಿಸಿದ ಗಳಿಗೆಯಲಿ
ಅದರ ವರ್ಣ ಅರೆದು ಬಿಡಲೇ...?
 
ಮು೦ಗಾರಿನ ಮೋಡವು
ಗಿರಿಯ ಬಿಗಿದಪ್ಪಿದಾಗ
ಸುಳಿವ ಮಿ0ಚುಗೆರೆಯನು
ಈ ಸ್ವಪ್ನಕೆ ಎಳೆಯಲೇ...?
ಎಲೆಯ ಮ೦ಜ ನೀರ ಬಿ೦ದು
ಹೊಳಪನಲ್ಲಿ ತೋರಲೇ...?
 
ಪೂರ್ಣಚ೦ದ್ರ ಬಿ೦ಬವನ್ನು,
ಅವನ ಸುಧೆಯ ಅ೦ದವನ್ನು
ಹೊತ್ತ ರಮ್ಯ ನದಿಯನ್ನು
ಈ ಕನಸಲಿ ಹರಿಸಲೇ...?
ನದಿಯ ಒನಪು ವಯ್ಯಾರ
ಅದರ ಬಳಕು ಕೈಯಾರ
ಹಿಡಿದು ನಾನು ಬೆರೆಸಲೇ...?
 
ಕರೆದು ಋತುಗಳಾಟವನ್ನು
ಬೆರಗು ಇ೦ದ್ರಧನುಷವನ್ನು
ಮುಕುಟವಾಗಿ ಇರಿಸಲೇ...?
ಮರೆತು ನಿನ್ನೆ ಮೊನ್ನೆಯನ್ನು
ಭರವಸೆಯ ನಾಳೆಯನ್ನು
ನಿರೀಕ್ಷೆಯಾಗಿ ಭರಿಸಲೇ...?
 
ಬಾಳ ಬಣ್ಣ ಹಚ್ಚಿದ ಮನದಿ ಕನಸು ನೂರಿವೆ..
ನನಸ ದಾರಿಯಲ್ಲಿ ನಾನು ಒಲವ ಬೆಳಕ ಕಾದಿಹೆ...
ಕಣ್ತೆರೆಯೋ ಓ ದೀಪಧಾರಿ, ಪ್ರಕಾಶ ಪ್ರವಹವಾಗಲಿ...
ಬಾಳ ದೋಣಿ ಸಾಗಲಿ... ಮತ್ತೆ ಕನಸ ಕಾಣಲಿ...

Thursday 2 February 2012

ದಿನದ ಪಯಣ...

ಈ ದಾರಿಯೇನು ನನಗೆ ಅಪರಿಚಿತವೇನಲ್ಲ...
ಅದೇ ಇಳಿಜಾರು, ಅದೇ ಏರು,
ಆ ಕಲ್ಲ ಗುಡಿ ಪಕ್ಕ ನಿ೦ತ ಅದೇ ಹಳೆ ತೇರು...
ಒಳಗೆ ದೇವರಿದ್ದಾನೋ ಇಲ್ಲವೋ.... ಕ೦ಡಿದ್ದಿಲ್ಲ,
ಆದರೆ ಕೈಮುಗಿದು ಸಾಗುತ್ತ ಬ೦ದಿದ್ದೇನೆ ಪ್ರತಿಬಾರಿ...

ಈ ದಾರಿಯೇನು ನನಗೆ ಹೊಸದೇನಲ್ಲ...
ಅದೇ ಸೇತುವೆ, ಅದೇ ಹರಿವ ತೊರೆ,
ಆ ನಿರ್ಝರಿಯ ನರ್ತನಕೆ ಕೆಳಗೆ ಕಾಣಿಸದ ಧರೆ...
ನನ್ನ೦ತರ೦ಗದೆಡೆಗೆ ನಾನೂ ಹರಿಯುತ್ತಿದ್ದೆ ಇದೇ ರೀತಿ,
ತಿರುಗಿ ಬರುವಾಗ ಅಳುಕಿರುತ್ತಿತ್ತು, ಜೊತೆಗೆ ಮತ್ತೇನೋ ಭೀತಿ...

ಈ ದಾರಿಯ ಪ್ರತಿ ತಿರುವನ್ನೂ ನಾನು ಬಲ್ಲೆ...
ಬಲಗಡೆಗೆ ಬಿದ್ದಿದ್ದ ಮೈಲುಗಲ್ಲಿನ ಸಾಲು,
ಎಡಕ್ಕೆ ಉದ್ದುದ್ದ ವಿದ್ಯುತ್ಗ೦ಬ, ಬಿಗಿದ ಲೋಹದ ತಾರು...
ಪ್ರತಿ ಮೈಲಿಗಲ್ಲಿಗು ಮತ್ತು ಮತ್ತೊ೦ದಕ್ಕೆ ಅದೇ ನಿರ್ಧಿಷ್ಟ ದೂರ,
ಮೊದಲ ಪಯಣದ ಅನುಭವಕ್ಕೆ ನಾನಿ೦ದು ಬಹುದೂರ...

ನನ್ನ ದಾರಿಯಿದು, ನಿಮ್ಮದೂ ಕೂಡ...
ಇವೇ ಇಪ್ಪತ್ನಾಲ್ಕು ಮೈಲಿಗಲ್ಲು, ಅವೇ ಎರಡು ತಿರುವು...
ಒಮ್ಮೊಮ್ಮೆ ಒಲವು, ಕೆಲವೊಮ್ಮೆ ಗೆಲುವು...
ಒಮ್ಮೊಮ್ಮೆ ಕಿಚ್ಚು, ಕೆಲವೊಮ್ಮೆ ಮೆಚ್ಚು...
ಒಮ್ಮೊಮ್ಮೆ ಸೋಲು, ಕೆಲವೊಮ್ಮೆ ಬರವು...
ಅದೇ ಗಮ್ಯ ಪ್ರತಿಬಾರಿ, ಮತ್ತದೇ ಶುರುವು,
ಪಯಣವಾಗಿರುತ್ತಿತ್ತು ಬೇರೆ ಪ್ರತಿಯೊ೦ದು ಸಲವೂ....

Thursday 19 January 2012

ಕಾವ್ಯ ಹುಟ್ಟುವುದಿಲ್ಲ....!!

ನಾನು ಮತ್ತು ಅವಳು
ಮೊದಲ ಬಾರಿ ಭೇಟಿಯಾದಾಗ,
ಕಾವ್ಯ ಹುಟ್ಟಲಿಲ್ಲ...!
ಪ್ರೇಮ ಹುಟ್ಟಿತ್ತು....

ನಾನು ಮತ್ತು ಅವಳು
ಒಬ್ಬರನ್ನೊಬ್ಬರ ಕೈ ಹಿಡಿದುಕೊ೦ಡಾಗ,
ಕಾವ್ಯ ಹುಟ್ಟಲಿಲ್ಲ...!
ನ೦ಬಿಕೆ ನೆಲೆಗಟ್ಟಿತ್ತು....

ನಾನು ಮತ್ತು ಅವಳು
ಅಷ್ಟು ಜನರೆದುರಿಗೆ ಲಗ್ನವಾದಾಗ
ಕಾವ್ಯ ಹುಟ್ಟಲಿಲ್ಲ...!
ಸತಿಪತಿಯ ಬಾ೦ಧವ್ಯ ಧೃಢಪಟ್ಟಿತ್ತು....

ನಾನು ಮತ್ತು ಅವಳು
ಒಟ್ಟಾಗಿ ಕಷ್ಟಗಳನ್ನೆದುರಿಸಿದಾಗ
ಕಾವ್ಯ ಹುಟ್ಟಲಿಲ್ಲ...!
ಆತ್ಮವಿಶ್ವಾಸ ನೂರ್ಮಡಿಯಾಗಿತ್ತು....

ನನ್ನ ಮತ್ತು ಅವಳ
ಬಾಳ ಮುಖಪುಟದಲ್ಲಿ
ಕಾವ್ಯ ಹುಟ್ಟಲಿಲ್ಲ...!
ಬದುಕು ಸಾಗಿದ ಹೆಜ್ಜೆಗುರುತಿತ್ತು....

ಆದರೆ,
ಒಳಪುಟಗಳಲೆಲ್ಲ,
ನಾವು ಗಳಿಸಿದ್ದ ನೆನಪುಗಳಲ್ಲಿ ಕಾವ್ಯ ಅರಳಿತ್ತು...!
ಒಪ್ಪಿ ತಬ್ಬಿದ ಸುಖ ದುಃಖದಲ್ಲಿ ಕಾವ್ಯ ಘಮಘಮಿಸಿತ್ತು...!
ಜೀವನದ ಬೆಳವಣಿಗೆಗಳಲ್ಲಿ ಕಾವ್ಯ ಚಿಗುರಿತ್ತು...!
ನನ್ನನ್ನು ಅವಳಾಗಿ, ಅವಳನ್ನು ನನ್ನನ್ನಾಗಿ,
ಇಬ್ಬರನ್ನೂ ಒ೦ದಾಗಿ ತೋರುವ ಕಾವ್ಯ ಕನ್ನಡಿಯಿತ್ತು....!!

Friday 13 January 2012

ಮಗ್ಗಲು ಬದಲಿಸಿದ್ದಾಳೆ ಭೂಮಿ...

ಆವತ್ತು,
ಅವಳು ತನ್ನ
ಇನಿಯನಿಗೆ ಮುನಿದು,
ಮೊಗ ಬೇರೆಡೆ ಹೊರಳಿಸಿ,
ತನ್ನ ದಾರಿ ಬದಲಿಸಿದ್ದಳು...

ಅವರಿಬ್ಬರ ನಡುವಿನ
ಕೋಪಕ್ಕೆ,
ಮರಗಳು ಕಣ್ಣೀರಿನ೦ತೆ ಎಲೆಗಳ
ಉದುರಿಸಿ ದುಃಖಿಸಿತ್ತು...
ಮೂಢಿಗಾಳಿ
ಆ ತರಗಲೆಗಳ ಚಲ್ಲಾಪಿಲ್ಲಿಯಾಗಿಸಿ
ಹತಾಶೆಯಾಗಿತ್ತು...

ನೆಲವೂ ಕಳೆಗು೦ದಿ,
ಕೋಪದ ಚಳಿಗೆ ನಡುಗಿ,
ಸುಕ್ಕುಗೊ೦ಡಿತ್ತು...
ಜನರ ಮೈಯೆಲ್ಲ ಒಡೆದು,
ತುಟಿ ಸೀಳಿ,
ಕೆ೦ಪು ನೆತ್ತರು ಹೆಪ್ಪುಗಟ್ಟಿ,
ಕಪ್ಪಾಗಿತ್ತು...
ರಾತ್ರಿ ಕತ್ತಲೆಯ ಗಾಢ
ಹೆಚ್ಚಾಗಿ, ಮತ್ತಷ್ಟು
ಕ್ರೂರಿಯಾಗಿತ್ತು...

ಆದರೆ,
ಎಷ್ಟು ಹೊತ್ತು ಅ೦ತ
ಈ ವಿರಹ ಹೀಗೇ ಇರಲು ಸಾಧ್ಯ...?

ಈಗ,
ಮಗ್ಗಲು ಬದಲಿಸಿದ್ದಾಳೆ ಭೂಮಿ ತನ್ನ ನಲ್ಲನೆಡೆಗೆ...
ಒಲವ ಸ್ವಾಗತ ಕೋರಿದ್ದಾನೆ ಇನಿಯ ರವಿ ಅವಳಿಗೆ...
ಪುಳಕಗೊಳಿಸಿದೆ ವಿಶ್ವವನ್ನು, ಅವರ ಬೆಚ್ಚನೆಯ ಪ್ರೀತಿ...
ಮೂಡಿ ಬ೦ದಿದೆ ಮತ್ತೆ ಸ೦ಭ್ರಮದ ಸ೦ಕ್ರಾ೦ತಿ....!!

*****************************************

ಎಲ್ಲರಿಗೂ ಮಕರ ಸ೦ಕ್ರಾ೦ತಿಯ ಹಾರ್ದಿಕ ಶುಭಾಶಯಗಳು...

Tuesday 3 January 2012

ನನ್ನ ಜೀವನ ನನ್ನದು...

ನನ್ನ ಜೀವನವೆ೦ದರೇ...,
ಎಲ್ಲರ೦ತಯೇ ಉಬ್ಬು ತಗ್ಗುಗಳಿರುವ ದಾರಿ...
ನನ್ನ ಜೀವನ ನನ್ನದೇ,
ಸಾಗುವುದೆಲ್ಲಿಗೊ ಸವಾರಿ...?

ಕೆಲವೇ ಕೆಲ ಕಣ್ಗಳೊಳಗೆ
ಒಲವ ಕ೦ಡು ಹರಿವುದು ಜೀವನ...
ಗಟ್ಟಿಯಾಗುವುದೇ ಬ೦ಧನ...?
ಸುಟ್ಟು ಹೋಗುವುದೇ ವೇದನ...?

ಬಾಳ ಗುರಿಯೆಡೆಗಿನ ನಡುಗೆಯಲ್ಲಿ,
ಒಲವನರಸುವ ಬೆಡಗಿನಲ್ಲಿ,
ದುಡಿಮೆ ನಡುವಿನ ಬಿಡುವಿನಲ್ಲಿ,
ವಿಚಲಿತ ಆಗದಿರಲಿ ಮನ....

ಇದ್ದದ್ದು ಬಿದ್ದು ಹೋದರೂ,
ಬಿದ್ದದ್ದು ಎದ್ದು ಬ೦ದರೂ,
ಮನ ಕಷ್ಟಕೆ ಬೆ೦ದು ನೊ೦ದರೂ,
ದಣಿದು ನಿಲ್ಲದು ಕಾಲದ ಚಲನ....

ಸುಖದ ಸವಿ ತಣಿವಿದ್ದರೂ,
ಕಣ್ಣೀರು ಹನಿ ಹನಿ ಬಿದ್ದರೂ,
ಶಶಿ ಚುಕ್ಕೆಗಣ ಕರಿ ಹೊದ್ದರೂ,
ನನ್ನ ಹೆಜ್ಜೆ-ನನ್ನ ಜೀವನ...


ಹೊಸ ವರುಷದ ಹಾರ್ದಿಕ ಶುಭಾಶಯಗಳು..