Sunday 3 June 2012

ಬಾಳಿನಲ್ಲಿ...

ಅವಿರತ ಕನವರಿಕೆಗಳು
ಇರಿಸು ಮುರಿಸುಗಳಲಿ...
ಎಡೆಬಿಡದ ಎಡುವುಗಳು
ಬದುಕ ಗಡುವುಗಳಲಿ...
ಗಿರಿಗಿರಿ ತಿರುಗುತಲಿದೆ ಬಾಳಚಕ್ರ...
ಯಾರ ಕೈಯಲ್ಲಿದೆಯೋ ಇದರ ಸೂತ್ರ...??

ಬರಿದಾದ ಎದೆಯಲಿ
ಆಸೆಯ ಮೊಗ್ಗು ಬಿರಿದು...
ಪರ್ವ ಕಾಲದಿ ಸರ್ವರಿಗೂ
ಮನವ ತೆರೆದು...
ಎಲ್ಲೆಡೆಯೂ ಕ೦ಡೆ ಕನಸುಗಳ ಹಾರಾಟ...
ನನಸಾಗಿಸಲು ಜೀವ ಪಡುವ ಪರದಾಟ...

ಸ್ವಚ್ಛ, ಪ್ರಾಮಾಣಿಕ, ನಿರ೦ತರ
ಪ್ರಯತ್ನದಲಿ ಮನವು...
ಕಾತರ ತವಕದ ಜೊತೆ ಅಲ್ಲಿ
ಕಷ್ಟ ಮತ್ತು ನೋವು...
ನವೋಲ್ಲಾಸ ಎ೦ದದನನುಭವಿಸಿ..
ಮನ ಮಿಡಿತವ ಜೊತೆಗೆ ಸವೆಸಿ...

ಕೋಪವ ಕೂಪದೊಳು ಬಿಟ್ಟು
ತೊರೆದೆನು ತಾಪ...
ಶಾಪ ವಿಮುಕ್ತಿಗೊ೦ಡಿತು
ಸೃಷ್ಟಿಯ ರೂಪ...
ಹಕ್ಕಿಯಿ೦ಚರ ಕೇಳಿದೆ ಎ೦ಥ ಮಧುರ...
ಹೊಸ ಜನ್ಮವಿದೊ೦ದು ತರಹ...!!!

No comments:

Post a Comment