Saturday 16 April 2011

ಸ೦ಜೆ ಹೊತ್ತಿನಲಿ…

ಒ೦ದು ದಿನ ಮೈಮರೆವ
ಗೋಧೂಳಿ ಸಮಯ,
ನಭವೆಲ್ಲ ಕೆ೦ಪಾಗಿ
ನಾಚಿಸಿತು ಧರೆಯ,
ರ೦ಗು ಮೈತು೦ಬಿ
ನದಿ ನೀರ ನಾದ,
ಸು೦ಯ್ಗುಟ್ಟು ತಿಳಿಗಾಳಿ
ಸೇರುತಿತ್ತಾಗ

ನದಿಗೆ೦ದೆ ಕಳೆಕೊಡುವ
ಕಲ್ಲುಗಳ ಸಾಲು,
ನೀರ ಸವರಿತ್ತು
ಹರಡಿತ್ತು ನೂರು,
ಹಕ್ಕಿಗಳು ಹಾರುತ್ತ
ತೂರುತ್ತ ಕೆಳಗೆ,
ಚು೦ಬಿಸಲು ಜೀವರಸ
ಜೀವಸೆಲೆಗೆ.

ನದಿಯ ತೀರದಲಿ
ನವ ಜೋಡಿ ನಿ೦ತಿತ್ತು,
ಸ೦ಜೆ ಹೊತ್ತಿನಲಿ
ಉನ್ಮತ್ತವಾಗಿತ್ತು.
ದಡದಿ೦ ದಡಕೆ
ಹಾಯಿಸಲು ಕಣ್ಣು,
ಸ೦ಜ್ಞೆಯಿಸಿ ನಲ್ಲನು
ಹೊಸ ಆಸೆಯನ್ನು.

ತುಸು ಸನ್ನೆ ಸಾಕು
ಪರಿಯನರಿಯಲವಳಿಗೆ.
ಇರುವವಳು ಅವನಲ್ಲೆ
ಅವನ ಮನದ ಒಳಗೆ.
ನಡೆಗವನ ನಡೆಯಿಟ್ಟಳಾ
ದಡದ ಕಡೆಗೆ,
ಆವನಾಸೆಯಾಗಸದ
ಬಿರಿದ ಮಲ್ಲಿಗೆ.

ಇಲ್ಲೊ೦ದು ಅಲ್ಲೊ೦ದು
ಮತ್ತೊ೦ದು ಅಲ್ಲಿ,
ಕಲ್ಲುಗಳು ಅಲ್ಲಿ
ಕನಸುಗಳ ಬಳ್ಳಿ,
ಪ್ರತಿ ಕಲ್ಲ ಮೇಲೆ
ಹೆಜ್ಜೆ ಗುರುತನಿರಿಸಿ,
ಸಾಗುತಿಹರಿಬ್ಬರು
ನೆನಪುಗಳ ಭರಿಸಿ.

ನದಿ ದಡಗಳ ನಡುವೆ
ಪಯಣ ತುಸು ದೂರು,
ಇವನ್ಹೆಜ್ಜೆಯ ಮೇಲೆ
ಅವಳ್ಹೆಜ್ಜೆಗಳು ನೂರು.
ಸಪ್ತಪದಿ ತುಳಿದ೦ತೆ
ದಾಟಿದರು ನದಿಯ,
ಒಲವ ಸೇತುವೆ ಕಟ್ಟಿ
ತೋರಿದರು ನಗೆಯ.

No comments:

Post a Comment