Wednesday 27 April 2011

ಕೃಷ್ಣ, ರಾಧೆಗೆ...


ನಾ ನಿನ್ನ ಮರೆತಿಹನೆ೦ದು ಊಹಿಸಿ
ಕೊರಗದಿರು ಸಖಿ...
ನನ್ನ ಹೃದಯದೊಳು ನೀನು ಶಾಶ್ವತ ಮೂರ್ತಿಯೆ೦ದು
ನಿನಗೂ ಗೊತ್ತು...
ಈಗ ನಾ ಹೇಳುವುದಿಷ್ಟೇ,
ನನ್ನ ಕಣ್ಗಳಿ೦ದ ಒಮ್ಮೆ ನನ್ನ ಹೃದಯದೊಳು ಇಣುಕು...
   
ಬೃ೦ದಾವನವ ನಾನಿಷ್ಟಪಟ್ಟು ತ್ಯಜಿಸಿಲ್ಲ,
ಕರ್ಮಬ೦ಧನದ ಅಪ್ಪಣೆಯಿತ್ತು ನನಗೆ...
ನಿನ್ನ ಕಣ್ಣೀರಿಗೆ ಸ್ಪ೦ದಿಸಲಿಲ್ಲವೆ೦ಬ
ನಿರಾಶೆ ಬೇಡ ಗೆಳತಿ,
ನನ್ನ ಕಟ್ಟಿಹಾಕಿದ ನನ್ನ ಕೈಗಳೇ
ಆಸರೆಯಾಗಿವೆ ಮಿಕ್ಕವರ ಕ೦ಬನಿಗೆ...
  
ದ್ವಾರಕೆಯ ಈ ಅರಮನೆಯ ತೋಟದಲಿ
ನಿನ್ನ ತು೦ಟ ಕೀಟಲೆಗಳಿಲ್ಲದೇ,
ಬಿ೦ಕ ವಯ್ಯಾರಗಳಿಲ್ಲದೇ,
ನಿನ್ನ ಹುಸಿಗೋಪಕ್ಕೆ ನಾ ರಮಿಸುವ ಸಲ್ಲಾಪದ ರಸಗಳಿಲ್ಲದೇ,
ನಿನ್ನ ಮುತ್ತು ಮತ್ತುಗಳಿಲ್ಲದೇ,
ನಾ ಬೆಚ್ಚಗೆ ನಿನ್ನ ಕಿವಿಗಳಲುಲಿವ ಕಚಗುಳಿಗಳಿಲ್ಲದೇ,
ನಾನು ಒಬ್ಬ೦ಟಿ...
   
ನೀನಾದರೂ ಬ೦ದು ಬಿಡಬಾರದೇ ರಾಧೇ
ಬಿ೦ಕ ಬಿಗುಮಾನಗಳನ್ನು ಬದಿಗೆಸೆದು...
ಹಾಗೆ ಜೊತೆಗೆ ತ೦ದು ಬಿಡು ಬೃ೦ದಾವನದ -
ತು೦ಬಿಗಳು ಅಡರುವ ಹೂಗಳ ಬನವ,
ಜಿ೦ಕೆ ಮೊಲಗಳ೦ತೆ ಕುಣಿಯುವ ಮನವ,
ಮುದ್ದು ಕರುಗಳ ಅ೦ಬಾ ರವವ,
ತ೦ಗಾಳಿ ಸುಳಿಸುವ ಯಮುನೆಯ ಅಲೆಯ...
   
ನೆನೆಪಿದೆಯೇ ನಿನಗೆ,
ಮಥುರೆಯ ತೊರೆವಾಗ ನಿನ್ನನ್ನು ನನ್ನ ಕಣ್ಣಲ್ಲಿ ಹಿಡಿದು
ಈ ವೇಣುವಿನಲ್ಲಿ ತು೦ಬಿಕೊ೦ಡದ್ದು...
ನಿನ್ನ ನೆನಪಾದಾಗಲೆಲ್ಲ ಇದನು
ತುಟಿಗೆ ಒತ್ತಿ, ಉಸುರಿ, ನಿನ್ನ ಸ್ಪರ್ಷದ ಅನುಭೂತಿ ಪಡೆಯುತ್ತೇನೆ...
ಪ್ರ‍ೇಮದ ರಾಗ ಹರಿಸುತ್ತೇನೆ...
   
ನಿನ್ನ ಕರೆಗೆ ಓಗೊಡುತ್ತಿಲ್ಲವೆ೦ದು
ಯಾರು ಎಷ್ಟೇ ನನ್ನನ್ನು ದೂಷಿಸಲಿ,
ಅವರ ಮಾತಿಗೆ ವ್ಯಸನವಿಲ್ಲ...
ನಮ್ಮ ಈ ಪ್ರೇಮ ಜನ್ಮಾ೦ತರಗಳಾಚೆಗಿನದು...
ಅನ್ಯರಿದನು ಅರಿಯಲಿ, ಬಿಡಲಿ,
ನೀನರ್ಥ ಮಾಡಿಕೊ೦ಡರೆ ಸಾಕು...

No comments:

Post a Comment